ಕಲಬುರಗಿ | ರಂಗ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಿಗೆ ಸತ್ಕಾರ

ಕಲಬುರಗಿ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏ.3ರಂದು ನಡೆಯಲಿರುವ ಜಿಲ್ಲಾ ಮಟ್ಟದ ಪ್ರಥಮ ರಂಗ ಸಾಹಿತ್ಯ ಸಮ್ಮೇಳನ ಯಶಸ್ವಿಗಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಹೇಳಿದರು.
ಸಮ್ಮೇಳನ ಅಂಗವಾಗಿ ರಚಿಸಿದ ಸ್ವಾಗತ ಸಮಿತಿ ಗೌರವಧ್ಯಕ್ಷ ರಾಜುಗೌಡ ನಾಗನಹಳ್ಳಿ ಹಾಗೂ ಅಧ್ಯಕ್ಷರಾದ ಗಿರಿರಾಜ ಯಳಮೇಲಿ ಅವರಿಗೆ ಏರ್ಪಡಿಸಿದ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.
ರಂಗ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಾಗಪ್ಪಯ್ಯ ಮಹಾಸ್ವಾಮಿಗಳು ಆಯ್ಕೆ ಮಾಡಲಾಗಿದ್ದು, ನಗರದ ಕನ್ನಡ ಭವನದ ಆವರಣದಲ್ಲಿ ಸಮ್ಮೇಳನ ಅದ್ಧೂರಿಯಾಗಿ ಜರುಗಲು ಪೂರ್ವ ಸಿದ್ಧತೆಗಳು ಪೂರ್ಣಗೊಳಿಸಲಾಗಿದೆ. ಜಿಲ್ಲೆಯ ಎಲ್ಲಾ ನಾದಕರಂಗಗಳ ಕಲಾವಿದರು, ರಂಗಕರ್ಮಿಗಳು ಹಾಗೂ ರಂಗಾಸಕ್ತರನ್ನು ಒಂದೆಡೆ ಸೇರಿಸಿ ರಂಗ ಕಲೆಯ ಮಹತ್ವದ ವಿಚಾರಗಳ ಕುರಿತು ಚರ್ಚೆ ಮಾಡಲಾಗುತ್ತದೆ. ರಂಗಕಲೆಯಲ್ಲಿ ಅನನ್ಯ ಸೇವೆ ಸಲ್ಲಿಸುತ್ತಿರುವ ರಂಗಕಲಾವಿದರನ್ನು ಗುರುತಿಸಿ ಸತ್ಕರಿಸುವ ಕಾರ್ಯಕ್ರಮ ಕೂಡ ಆಯೋಜಿಸಲಾಗಿದೆ ಎಂದರು.
ರಂಗಕಲಾವಿದರಿಂದ ನಾಟಕ ಪ್ರದರ್ಶನ ಏರ್ಪಡಿಸಲಾಗಿದೆ. ಈ ಒಂದು ದಿನದ ಸಮ್ಮೇಳನವನ್ನು ಅರ್ಥಪೂರ್ಣವಾಗಿ ನಡೆಸಲು ಸಹಕರಿಸಬೇಕು ಎಂದು ಅವರು ಮನವಿ ಮಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಸ್ವಾಗತ ಸಮಿತಿ ಅಧ್ಯಕ್ಷ ಗಿರಿರಾಜ ಯಳಮೇಲಿ ಅವರು, ಇಂಗ್ಲೀಷ್ ಕಲಿಕೆಯ ವ್ಯಾಮೋಹ ಹೆಚ್ಚುತ್ತಿರುವ ಇಂದಿನ ವ್ಯವಸ್ಥೆಯಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸಬೇಕಾಗಿದೆ. ಇದಕ್ಕಾಗಿ ಎಲ್ಲರೂ ಕನ್ನಡ ಕಟ್ಟುವ ಕೆಲಸಕ್ಕೆ ಕೈ ಜೋಡಿಸೋಣ ಎಂದು ತಿಳಿಸಿದರು.
ಗೌರವ ಕಾರ್ಯದರ್ಶಿಗಳಾದ ಶಿವರಾಜ ಅಂಡಗಿ, ಧರ್ಮಣ್ಣ ಎಚ್ ಧನ್ನಿ, ಕೋಶಾಧ್ಯಕ್ಷ ಶರಣರಾಜ ಛಪ್ಪರಬಂಧಿ ಹಾಗೂ ಪ್ರಮುಖರಾದ ರವೀಂದ್ರ ಕುಮಾರ ಭಂಜನಳ್ಳಿ, ಬಾಬುರಾವ ಪಾಟೀಲ, ಎಂ ಎಸ್ ಪಾಟೀಲ ನರಿಬೋಳ, ನರಸಿಂಗರಾವ ಹೇಮನೂರ, ಸೈಯದ್ ನಜೀರುದ್ದೀನ ಮುತಾವಲಿ, ನವಾಬ ಖಾನ, ಅಮೃತಪ್ಪ ಆಣುರ, ಸಂತೋಷ ಕುಡಳ್ಳಿ, ಧರ್ಮರಾಜ ಜವಳಿ, ಶಿವಲೀಲಾ ಕಲಗುರ್ಕಿ, ರಾಜೇಂದ್ರ ಮಾಡಬೂಳ ಮತ್ತಿತರರು ಉಪಸ್ಥಿತರಿದ್ದರು.