ಸಂಸ್ಕೃತಿ, ವಿವೇಕ ಮತ್ತು ಸಾಮಾಜಿಕ ಬದ್ಧತೆ ಇಲ್ಲದ ಪದವಿಗಳಿಗೆ ಅರ್ಥವಿಲ್ಲ: ಡಾ.ಸಿ.ಎನ್. ಮಂಜುನಾಥ್

Update: 2024-03-03 13:47 GMT

ಮೈಸೂರು: ಸಂಸ್ಕೃತಿ, ವಿವೇಕ ಮತ್ತು ಸಾಮಾಜಿಕ ಬದ್ಧತೆ ಇಲ್ಲದ ಪದವಿಗಳಿಗೆ ಅರ್ಥವಿಲ್ಲ. ಅದೆಲ್ಲ ಚರಂಡಿ ನೀರಿನಂತೆ ನಿಷ್ಪ್ರಯೋಜಕ ಎಂದು ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ ವಿಶ್ರಾಂತ ನಿರ್ದೇಶಕ ಡಾ.ಸಿ.ಎನ್‌. ಮಂಜುನಾಥ್‌ ತಿಳಿಸಿದರು.

ಕ್ರಾಫರ್ಡ್‌ ಭವನದಲ್ಲಿ ರವಿವಾರ ನಡೆದ ಮೈಸೂರು ವಿಶ್ವವಿದ್ಯಾನಿಲಯದ 104ನೇ ಘಟಿಕೋತ್ಸವದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಪದವೀಧರರು ಜೀವನದಲ್ಲಿ ಯಶಸ್ಸು ಸಾಧಿಸಲು ಮತ್ತು ಆರೋಗ್ಯ ಕಾಪಾಡಿಕೊಳ್ಳಲು ಅನುಸರಿಸಬೇಕಾದ ಕ್ರಮಗಳನ್ನು ವಿವರಿಸಿದರು.

ದೇಶವನ್ನು ಉನ್ನತ ಮಜಲಿಗೆ ಕೊಂಡೊಯ್ಯಬೇಕಾದ ಅನೇಕ ಸುಶಿಕ್ಷಿತ ಜನರೇ ಇವತ್ತು ಕಾನೂನು ಬಾಹಿರ ಸಂಗತಿಗಳಲ್ಲಿ ಅಪರಾಧ ಕೃತ್ಯಗಳಲ್ಲಿ ದ್ವೇಷ ಮುಂತಾದ ವಿನಾಶಕಾರಿ ವಿಚಾರಗಳಲ್ಲಿ ತೊಡಗಿರುವುದು ಆತಂಕಕಾರಿಯಾಗಿದೆ. ಹಾಗಾಗಿ ವಿದ್ಯಾರ್ಥಿಗಳು ನಿಮ್ಮ ಬುದ್ಧಿವಂತಿಕೆಯನ್ನು ಹೆಚ್ಚು ರಚನಾತ್ಮಕ ಉದ್ದೇಶಗಳಿಗೆ ಬಳಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳ ಕನಸು ನನಸಾಗಬೇಕಾದರೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆತ್ಮವಿಶ್ವಾಸವಿಲ್ಲದಿದ್ದರೆ ಅಂಥವರಿಗೆ ಯಶಸ್ಸು ಸಾಧ್ಯವಾಗುವುದಿಲ್ಲ ಎಂದರು.

ಅಂಕಗಳು ಹಾಗೂ ಶೈಕ್ಷಣಿಕ ಶ್ರೇಷ್ಠತೆಯೇ ನಮ್ಮ ಯಶಸ್ವೀ ಬದುಕಿನ ಮಾನದಂಡವಲ್ಲ. ಕಡಿಮೆ ಅಂಕಗಳನ್ನು ತೆಗೆದುಕೊಂಡವರೂ ಬದ್ಧತೆ, ಶ್ರಮ ಹಾಗೂ ಶ್ರದ್ಧೆಯಿಂದ ಸಾಧಕರಾಗಬಹುದು ಎಂದು ಹುರಿದುಂಬಿಸಿದರು. ಸ್ಥಾನಮಾನಕ್ಕಿಂತ ಶ್ರದ್ಧೆ ಬಹಳ ಮುಖ್ಯ. ಹಿರಿತನಕ್ಕಿಂತ ಪ್ರಾಮಾಣಿಕತೆ ಮುಖ್ಯ. ಬೆಲೆ ಬಾಳುವ ವಸ್ತುಗಳಿಗಿಂತ ಮೌಲ್ಯಗಳು ಮುಖ್ಯ. ಅಂಕಗಳಿಗಿಂತ ಮನಸ್ಸನ್ನು ಅಂಕೆಯಲ್ಲಿಡುವುದು ಮುಖ್ಯ ಎಂದು ತಿಳಿಸಿದರು.

ಸೋಲೆಂಬುದು ಕಲಿಕೆ ಮೊದಲನೆ ಹೆಜ್ಜೆ. ಒಂದೇ ಬಾರಿಗೆ ಯಶಸ್ಸು ಲಭಿಸಲಾರದು. ಇದು ಸ್ಪರ್ಧಾತಕ ಜಗತ್ತಾಗಿರುವುದರಿಂದ ಅವಕಾಶಗಳಿಗೆ ಮಿತಿ ಇದೆ. ಯಾವುದೇ ಉದ್ಯೋಗ ಮಾಡಲು ಸಿದ್ಧರಾಗಬೇಕು. ಕೌಶಲ್ಯ ತರಬೇತಿ ಪಡೆಯುವುದು ಅತ್ಯವಶ್ಯ ಎಂದು ನುಡಿದರು.

ಡಿಜಿಟಲ್‌ ತಂತ್ರಜ್ಞಾನ ಹಾಗೂ ಸಾಮಾಜಿಕ ಮಾಧ್ಯಮದ ಉನ್ನತೀಕರಣ ಜ್ಞಾನ ಮತ್ತು ಚಿಂತನೆಗಳ ಪ್ರಸರಣದಲ್ಲಿ ಕ್ರಾಂತಿಯನ್ನೇ ಉಂಟು ಮಾಡಿದೆ. ಇದು ಇಬ್ಬಾಯಿ ಖಡ್ಗವೆಂಬುದೂ ನಿಜವೆ. ಒಂದು ಸ್ಮಾರ್ಟ್‌ ಫೋನಿದ್ದರೆ ಇಡೀ ಜಗತ್ತೇ ನಿಮ್ಮ ಕೈಯಲ್ಲಿದ್ದಂತೆ. 3ಜಿ, 4ಜಿ ಬಗ್ಗೆ ಮಾತಾಡುವಂತೆ ಜಿ(G)ಗಳು ನಮಗೆ ಹೊಸತಲ್ಲ. ಗುರು, ದೇವರು, ಗೈಡ್‌, ಗೂಗಲ್‌ ಇವುಗಳನ್ನು ಸಮರ್ಪಕವಾಗಿ ಬಳಸಿಕೊಳ್ಳೋಣ.

-ಡಾ.ಸಿ.ಎನ್‌.ಮಂಜುನಾಥ್‌,

ಪದವಿ 3ನೇ ವರ್ಷ ಇಂಟರ್ನ್‌ಶಿಫ್‌ ಜಾರಿಗೆ ಚಿಂತನೆ: ಸಚಿವ ಸುಧಾಕರ್‌

3 ವರ್ಷದ ಪದವಿ ಕೋರ್ಸ್‌ಗಳಲ್ಲಿ ಕೊನೆಯ ವರ್ಷ ಕೌಶಲಾಧಾರಿತ ವಿಷಯಗಳ ತರಬೇತಿ ನೀಡಲು ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಫ್‌ ಜಾರಿಗೆ ತರಲು ಚಿಂತನೆ ನಡೆಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಅವರು ತಿಳಿಸಿದರು.

ಈ ವಿಚಾರವಾಗಿ ಕೇಂದ್ರ ಮತ್ತ್ತು ರಾಜ್ಯಗಳ ಶಿಕ್ಷಣ ಇಲಾಖೆಯಲ್ಲಿ ಉನ್ನತ ಹುದ್ದೆಯಲ್ಲಿ ಇರುವ ಐಎಎಸ್‌‍ ಅಧಿಕಾರಿಗಳ ತಂಡ ಸ್ಥಾಪನೆ ಮಾಡಿಕೊಂಡಿರುವ `ಕ್ರಿಸ್‌‍' ಸಂಸ್ಥೆಯೊಂದಿಗೆ ಮಾತುಕತೆ ನಡೆಸಲಾಗಿದೆ. ಎಇಡಿಪಿ ಯೋಜನೆಯಡಿ ವಿದ್ಯಾರ್ಥಿಗಳಿಗೆ ಇಂಟರ್ನ್‌ಶಿಫ್‌ ನೀಡಿ ಮಾಸಿಕವಾಗಿ 11 ಸಾವಿರ ರೂ.ನಿಂದ 17 ಸಾವಿರ ರೂಪಾಯಿ ತರಬೇತಿ ಭತ್ಯೆ ನೀಡಲಾಗುತ್ತದೆ ಎಂದು ತಿಳಿಸಿದರು.

ಅಮೆರಿಕದ ರಮೇಶ್‌ ವಾಗ್ವನಿ ಫೌಂಡೇಷನ್‌ ಜತೆ 3 ಬಿಲಿಯನ್‌ ಡಾಲರ್‌ ಮೊತ್ತದ ಯೋಜನೆಗೆ ಒಡಂಬಡಿಕೆಗೆ ಮಾಡಿಕೊಳ್ಳಲಾಗಿದೆ. ಈ ಯೋಜನೆಯಲ್ಲಿ ಎಲ್ಲ ವಿಶ್ವವಿದ್ಯಾನಿಲಯಗಳ ಭೋದಕರು ಹಾಗೂ ವಿದ್ಯಾರ್ಥಿಗಳಿಗೆ ವೃತ್ತಿಪರತೆ ಬಗ್ಗೆ ತರಬೇತಿ ನೀಡಲಾಗುತ್ತದೆ. ಇಂಗ್ಲಿಷ್‌ ಪಾಂಡಿತ್ಯಕ್ಕೆ ತರಬೇತಿ ಕೊಡಲಾಗುತ್ತದೆ. ಮೊದಲಿಗೆ ಬೆಂಗಳೂರಿನ ಆರ್‌ಸಿ ಕಾಲೇಜಿನಲ್ಲಿ ಪ್ರಾರಂಭಿಸಲಾಗುತ್ತದೆ. ಬಳಿಕ ಮೈಸೂರು, ಮಂಗಳೂರು ವಿವಿಗೂ ವಿಸ್ತರಣೆ ಮಾಡಲಾಗುತ್ತದೆ. ಇಲ್ಲಿ ಸಾಧಕ-ಬಾಧಕಗಳನ್ನು ನೋಡಿ ಮುಂದೆ ಕಲಬುರ್ಗಿ, ಧಾರವಾಡ, ಶಿವಮೊಗ್ಗಕ್ಕೂ ವಿಸ್ತರಣೆ ಮಾಡಲಾಗುತ್ತದೆ ಎಂದು ತಿಳಿಸಿದರು.






 


 


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News