ಕಡಲ ಮೀನುಗಾರಿಕೆಗೂ ತಟ್ಟಿದ ಬಿಸಿಲ ಝಳ

ಮಂಗಳೂರು: ಹವಾಮಾನದಲ್ಲಿ ಏರುತ್ತಿರುವ ಬಿಸಿಲ ತೀವ್ರತೆ ಜನಸಾಮಾನ್ಯರನ್ನು ಕಂಗೆಡಿಸಿರುವ ಜತೆಗೆ ಕಡಲ ಮೀನುಗಾರಿಕೆಯ ಮೇಲೂ ಭಾರೀ ಹೊಡೆತ ನೀಡಿದೆ. ಕಳೆದ ಸುಮಾರು ಒಂದೂವರೆ ತಿಂಗಳಿನಿಂದೀಚೆಗೆ ಕರಾವಳಿಯುದ್ದಕ್ಕೂ ದಕ್ಕೆಗಳಲ್ಲಿ ಯಾಂತ್ರೀಕೃತ ಮೀನುಗಾರಿಕಾ ದೋಣಿಗಳು ಲಂಗರು ಹಾಕಿವೆ. ಮೀನುಗಾರಿಕೆಗೆ ತೆರಳುವ ಕೆಲವೊಂದು ದೋಣಿಗಳು ಬರಿಗೈಯಲ್ಲಿ ಮರಳುತ್ತಿದ್ದು, ಮೀನುಗಾರರು ಹತಾಶರಾಗಿದ್ದಾರೆ.
ರಾಜ್ಯ ಮೀನುಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರ ಕರಾವಳಿಯಲ್ಲಿ 2023-24ನೇ ಸಾಲಿನ ಫೆಬ್ರವರಿ ಹಾಗೂ 2024-25ನೇ ಸಾಲಿನ ಫೆಬ್ರವರಿವರೆಗಿನ ಕಡಲ ಮೀನು ಸಂಗ್ರಹದಲ್ಲಿ ಕುಸಿತ ಕಂಡು ಬಂದಿದೆ. ಕಳೆದ ಅವಧಿಗೆ ಹೋಲಿಸಿದರೆ ಕರಾವಳಿ ಜಿಲ್ಲೆಗಳಲ್ಲಿ ಮೀನಿನ ಸಂಗ್ರಹದಲ್ಲಿ ಈ ವರ್ಷ 2,14,208.42 ಮೆಟ್ರಿಕ್ ಟನ್ಗಳಷ್ಟು ಇಳಿಕೆಯಾಗಿದೆ.
ದ.ಕ. ಜಿಲ್ಲೆಯಲ್ಲಿ ಕಡಲ ಮೀನುಗಾರಿಕೆಗಾಗಿ ನೋಂದಾಯಿಸಿಕೊಂಡಿರುವ 1,600ರಷ್ಟು ಯಾಂತ್ರೀಕೃತ ದೋಣಿಗಳಲ್ಲಿ ಶೇ.75ಕ್ಕೂ ಅಧಿಕ ಮೀನುಗಾರಿಕಾ ದೋಣಿಗಳು ಬಂದರು ದಕ್ಕೆಯಲ್ಲಿ ಲಂಗರು ಹಾಕಿವೆ. ಹವಾಮಾನದಲ್ಲಿ ತಾಪಮಾನ ತೀವ್ರಗೊಂಡಿರುವುದರಿಂದ ಮೀನುಗಳು ಕೂಡಾ ಕಡಲ ಕಿನಾರೆಗಳಿಂದ ವಲಸೆ ಹೋಗಿರುವ ಸಾಧ್ಯತೆಗಳು ಅಧಿಕವಾಗಿದೆ. ಹೀಗಾಗಿ ರಿಸ್ಕ್ನೊಂದಿಗೆ ಮೀನುಗಾರಿಕೆಗೆ ತೆರಳುತ್ತಿರುವ ಕೆಲ ಕಡಲ ಮೀನುಗಾರಿಕೆ ದೋಣಿಗಳು ಕೂಡಾ ನಷ್ಟ ಅನುಭವಿಸುವಂತಾಗಿದೆ. ತಮ್ಮ ಬೋಟ್ಗಳಿಗೆ ಸಾಕಷ್ಟು ರೀತಿಯಲ್ಲಿ ಖರ್ಚುವೆಚ್ಚ ಮಾಡಿಕೊಂಡು ಹೂಡಿಕೆ
ಮಾಡಿರುವ ದೋಣಿಯವರು ನಷ್ಟ ಅನುಭವಿಸುತ್ತಿದ್ದಾರೆ. ಕೆಲ ಮೀನುಗಾರರು ತಮ್ಮ ಮನೆ, ಚಿನ್ನ ಅಡಮಾನ ಇರಿಸಿ ಮೀನುಗಾರಿಕೆ ನಡೆಸುವ ಪರಿಸ್ಥಿತಿಗೆ ಬಂದಿದೆ ಎನ್ನುತ್ತಾರೆ ಮೀನುಗಾರ ಮುಖಂಡರು.
ದ.ಕ. ಜಿಲ್ಲಾ ಮೀನುಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರ 2023-24ನೇ ಸಾಲಿನ ಜನವರಿಯಲ್ಲಿ 9,940 ಮೆಟ್ರಿಕ್ ಟನ್ ಕಡಲ ಮೀನು ಸಂಗ್ರಹವಾಗಿದ್ದರೆ, 2024-25ನೇ ಸಾಲಿನ ಜನವರಿಯಲ್ಲಿ ಸಂಗ್ರಹವಾದ ಮೀನಿನ ಇಳುವರಿ 6,665 ವೆು. ಟನ್. ಕಳೆದ ವರ್ಷ ಫೆಬ್ರವರಿಯಲ್ಲಿ 8,058 ಮೆಟ್ರಿಕ್ ಟನ್ಗಳಾಗಿದ್ದು, ಈ ವರ್ಷ 7,665 ಮೆಟ್ರಿಕ್ ಟನ್.
ಪ್ರಸಕ್ತ ಸಾಲಿನ ಮೀನುಗಾರಿಕಾ ಋತು ಆರಂಭಗೊಂಡಾಗ ಮೀನುಗಾರಿಕೆಯಲ್ಲಿ ಆಶಾದಾಯಕ ಬೆಳವಣಿಗೆ ಕಂಡು ಬಂದಿತ್ತು. ಹಾಗಾಗಿ ಆಗಸ್ಟ್ ತಿಂಗಳಲ್ಲಿ ಹಿಂದಿನ ಸಾಲಿಗಿಂತ ಸ್ವಲ್ಪ ಪ್ರಮಾಣದಲ್ಲಿ ಏರಿಕೆ ಕಂಡು ಬಂದಿತ್ತಾದರೂ, ಸೆಪ್ಟಂಬರ್ನಿಂದ ಇಳುವರಿ ಭಾರೀ ಪ್ರಮಾಣದಲ್ಲಿ ಕುಸಿಯುತ್ತಾ ಸಾಗಿದೆ. ಇದಕ್ಕೆ ಎಲ್ನಿನೋ ಚಂಡಮಾರುತದ ಪ್ರಭಾವ ಕಾರಣವಾಗಿದ್ದರೆ, ಇದೀಗ ತೀವ್ರ ತಾಪಮಾನದಿಂದಾಗಿ ಕಡಲ ಮೀನುಗಳು ವಲಸೆ ಹೋಗಿರುವ ಸಾಧ್ಯತೆ ಅಧಿಕವಾಗಿದೆ ಎಂದು ಹೇಳುತ್ತಾರೆ ಮೀನುಗಾರಿಕಾ ಇಲಾಖೆಯ ಉಪ ನಿರ್ದೇಶಕ ದಿಲೀಪ್ ಕುಮಾರ್.
ಅತಿಯಾದ ಮೀನುಗಾರಿಕೆ, ನಿಷೇಧದ ಅವಧಿಯಲ್ಲೂ ಮೀನುಗಾರಿಕೆ, ಅವೈಜ್ಞಾನಿಕ ರೀತಿಯಲ್ಲಿ ಕಡಲ ಮೀನುಗಾರಿಕೆಯಲ್ಲಿ ತೊಡಗಿಕೊಂಡಿರುವುದೂ ಮೀನಿನ ಇಳುವರಿಯಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗಿದೆ.
ಮೀನುಗಾರಿಕಾ ನಿಷೇಧದ ಅವಧಿಯನ್ನು ಮೂರು ತಿಂಗಳಿಗೆ ಹೆಚ್ಚಿಸಬೇಕು. ಮರಿ ಮೀನು ಹಿಡಿಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ಅಗತ್ಯ ಮಾರ್ಗಸೂಚಿಗಳನ್ನು ಅನುಸರಿಸುವುದು, ಬುಲ್ ಟ್ರಾಲಿಂಗ್, ಲೈಟ್ ಫಿಶಿಂಗ್ನಂತಹ ನಿಷೇಧಿತ ಮೀನುಗಾರಿಕಾ ವಿಧಾನಗಳನ್ನು ತಡೆದರೆ ಕಡಲ ಮೀನುಗಾರಿಕೆಯನ್ನು ಸಂರಕ್ಷಿಸಲು ಸಾಧ್ಯವಾಗುತ್ತದೆ ಎಂಬ ಅಭಿಪ್ರಾಯ ಮೀನುಗಾರಿಕಾ ವಲಯದಿಂದ ವ್ಯಕ್ತವಾಗಿದೆ.
ಏಕ ರೂಪದ ಮೀನುಗಾರಿಕಾ ನೀತಿಯೊಂದೇ ಪರಿಹಾರ: ಈಗಾಗಲೇ ಮೀನುಗಾರಿಕೆಯನ್ನೇ ತಮ್ಮ ಜೀವನಾಧಾರವಾಗಿಸಿಕೊಂಡಿರುವ ಮೊಗವೀರರು ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿದ್ದಾರೆ. ದೋಣಿಗಳಿಗಾಗಿ ಬ್ಯಾಂಕ್ ಸಾಲ ಮಾಡಿ ಇತ್ತ ಮೀನು ಇಲ್ಲದೆ ಸಾಲ ಕಟ್ಟಲಾಗದೆ, ಮನೆ, ಆಭರಣ ಅಡವಿರಿಸಿ ಕಂಗಾಲಾಗಿದ್ದಾರೆ. ನೈಜ ಮೀನುಗಾರರು ಅತ್ತ ವ್ಯವಹಾರಸ್ಥರೂ ಅಲ್ಲ, ಇತ್ತ ರೈತರೂ ಅಲ್ಲ ಎಂಬ ಅತಂತ್ರ ಸ್ಥಿತಿಯಲ್ಲಿದ್ದು, ಈ ಬಗ್ಗೆ ಸರಕಾರ ಗಮನ ಹರಿಸಬೇಕಾಗಿದೆ. ಬಹು ಮುಖ್ಯವಾಗಿ ಭಾರತ ಸರಕಾರ ಏಕರೂಪದ ಮೀನುಗಾರಿಕಾ ನೀತಿಯನ್ನು ಜಾರಿಗೊಳಿಸುವ ಮೂಲಕ ಮೀನುಗಾರರ ಸಂಕಷ್ಟಕ್ಕೆ ಪರಿಹಾರ ರೂಪಿಸಬೇಕು ಎಂದು ಮೀನುಗಾರ ಮುಖಂಡ ಚೇತನ್ ಬೆಂಗ್ರೆ ಅಭಿಪ್ರಾಯಿಸಿದ್ದಾರೆ.
ಸಾಮಾನ್ಯವಾಗಿ ಮೀನುಗಳಿಗೆ 27ಡಿಗ್ರಿ ಸೆಲ್ಸಿಯಸ್ನಿಂದ 32ಡಿಗ್ರಿ ಸೆಲ್ಸಿಯಸ್ರವರೆಗೆ ತಾಪಮಾನ ಉತ್ತಮವಾಗಿರುತ್ತದೆ. ಆದರೆ ಕಳೆದ ಒಂದೂವರೆ ತಿಂಗಳಿನಿಂದೀಚೆಗೆ ತಾಪಮಾನ ತೀವ್ರವಾಗಿ ಹೆಚ್ಚಾಗಿರುವುದರಿಂದ ಮೀನುಗಾರಿಕೆಗೆ ತೆರಳುತ್ತಿರುವ ಬೋಟ್ಗಳು ಮೀನು ಸಿಗದೆ ಖಾಲಿಯಾಗಿ ಮರಳುತ್ತಿವೆ. ಶೇ. 75ಕ್ಕೂ ಅಧಿಕ ಬೋಟುಗಳು ದಡಗಳಲ್ಲಿ ಲಂಗರು ಹಾಕಿವೆ. ಮೀನುಗಾರರು ಮುಂದಿನ ಎಪ್ರಿಲ್, ಮೇ ತಿಂಗಳಲ್ಲಾದರೂ ಹೆಚ್ಚಿನ ಇಳುವರಿ ಸಿಗಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
-ಸಿದ್ಧಯ್ಯ, ಜಂಟಿ ನಿರ್ದೇಶಕರು, ಮೀನುಗಾರಿಕಾ ಇಲಾಖೆ, ದ.ಕ.

ಮೀನು ಸಂಗ್ರಹ: ಕಳೆದ ಅವಧಿಗಿಂತ 2,14,208.42 ಮೆಟ್ರಿಕ್ ಟನ್ ಇಳಿಕೆ
ರಾಜ್ಯ ಮೀನುಗಾರಿಕಾ ಇಲಾಖೆಯ ಮಾಹಿತಿಯ ಪ್ರಕಾರ ದ.ಕ. ಜಿಲ್ಲೆ(ಮಂಗಳೂರು)ಯಲ್ಲಿ 2023-24ನೇ ಸಾಲಿನಲ್ಲಿ ಫೆಬ್ರವರಿವರೆಗೆ 2,32,966 ಮೆಟ್ರಿಕ್ ಟನ್ ಕಡಲ ಮೀನು ಸಂಗ್ರಹಿಸಲಾಗಿದ್ದರೆ, 2024-25ನೇ ಸಾಲಿನಲ್ಲಿ 1,64,905 ಮೆಟ್ರಿಕ್ ಟನ್ಗಳು. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 68,061 ಮೆಟ್ರಿಕ್ ಟನ್ಗಳಷ್ಟು ಕಡಲ ಮೀನಿನ ಸಂಗ್ರಹ ಕಡಿಮೆಯಾಗಿದೆ. ಉಡುಪಿಯಲ್ಲಿ ಕಳೆದ ಅವಧಿಯಲ್ಲಿ 3,50,648 ಮೆಟ್ರಿಕ್ ಟನ್ ಕಡಲ ಮೀನು ಹಿಡಿಯಲ್ಪಟ್ಟಿದ್ದರೆ, ಈ ವರ್ಷ 2,10,383 ಮೆಟ್ರಿಕ್ ಟನ್ಗಳು. ಈ ಮೂಲಕ 1,40,265 ಮೆಟ್ರಿಕ್ ಟನ್ ವ್ಯತ್ಯಾಸ ಕಂಡು ಬಂದಿದೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಕಳೆದ ಅವಧಿಯಲ್ಲಿ 1,05,730 ಮೆಟ್ರಿಕ್ ಟನ್ ಉತ್ಪಾದನೆಯಾಗಿದ್ದು, ಈ ವರ್ಷದ ಇಳುವರಿ 99,847.58 ಮೆಟ್ರಿಕ್ ಟನ್. ಈ ಮೂಲಕ 5,882 ಮೆಟ್ರಿಕ್ ಟನ್ ವ್ಯತ್ಯಾಸ ಕಂಡು ಬಂದಿದೆ. ಒಟ್ಟು ಕರಾವಳಿಯಲ್ಲಿ ಕಳೆದ ಅವಧಿಗೆ ಹೋಲಿಸಿದರೆ ಈ ಅವಧಿಗೆ 2,14,208.42 ಮೆಟ್ರಿಕ್ ಟನ್ಗಳ್ಟು ವ್ಯತ್ಯಾಸ ಕಂಡುಬಂದಿದೆ.