ಬಿಹಾರದಲ್ಲಿ ನಡೆಯುವ ಅಂತರರಾಜ್ಯ ಕಬ್ಬಡ್ಡಿ ಪಂದ್ಯಾವಳಿಗೆ ರಾಯಚೂರಿನ ಯುವಕ ನಾಯಕ

ರಾಯಚೂರು: ಬಿಹಾರದ ಗಯಾದಲ್ಲಿ ಆಯೋಜಿಸಲಾಗಿರುವ ಅಂತರ್ ರಾಜ್ಯ ಸಬ್ ಜೂನಿಯರ್ ಕಬಡ್ಡಿ ಪಂದ್ಯಾವಳಿಗೆ ರಾಯಚೂರು ತಾಲೂಕಿನ ರಾಳದೊಡ್ಡಿ ಗ್ರಾಮದ ಉದಯೋನ್ಮುಖ ಆಟಗಾರ ಗಣೇಶ ಕರ್ನಾಟಕ ತಂಡದ ನಾಯಕನಾಗಿ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ಶಿಕ್ಷಣ ಹಂತದಲ್ಲಿಯೇ ಪಠ್ಯದೊಂದಿಗೆ ಪಠ್ಯೇತರ ಚಟುವಟಿಕೆಯಲ್ಲಿಯೂ ಯುವ ತರಬೇತುದಾರರು ಹಾಗೂ ರಾಯಚೂರು ಜಿಲ್ಲಾ ಅಮೇಚೂರ್ ಕಬಡ್ಡಿ ಅಸೋಸಿಯೇಷನ್ ಜಿಲ್ಲಾಧ್ಯಕ್ಷ ಸುರೇಶ್ ರವರ ಮಾರ್ಗದರ್ಶನದಲ್ಲಿ ಪಳಗಿದ್ದ ಗಣೇಶ್ ಇತ್ತೀಚೆಗಷ್ಟೇ ಬೆಂಗಳೂರಿನಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಭಾಗವಹಿಸಿ ಪ್ರತಿಭೆ ಅನಾವರಣಗೊಳಿಸುವ ಮೂಲಕ ಆಯೋಜಕರು ಮತ್ತು ತೀರ್ಪುದಾರರ ಮೆಚ್ಚುಗೆಗೆ ಪಾತ್ರರಾಗಿದ್ದರು.
ಸುರೇಶ್ ನಲ್ಲಿ ಅಡಗಿರುವ ಕ್ರೀಡಾ ಚತುರತೆ ಮನಗಂಡು ಬಿಹಾರದ ಗಯಾದಲ್ಲಿ ನಾಳೆ ನಡೆಯಲಿರುವ 34 ನೇ ಸಬ್ ಜೂನಿಯರ್ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿಯಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವ ನಾಯಕನಾಗಿ ಆಯ್ಕೆಯಾಗಿರುವುದು ಜಿಲ್ಲೆಯ ಜನರ ಪಾಲಿಗೆ ಸಂತೋಷದ ವಿಷಯವಾಗಿದೆ. ಈತನ ಸಾಧನೆಗೆ ರಾಯಚೂರು ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಹರ್ಷ ವ್ಯಕ್ತಪಡಿಸಿದೆ.
ಇಂದು ನಡೆಯಲಿರುವ ಕಬಡ್ಡಿ ಪಂದ್ಯಾವಳಿಯಲ್ಲಿ ರಾಜ್ಯ ತಂಡ ವಿಜೇತರಾಗಿ ರಾಷ್ಟ್ರ ಮಟ್ಟದ ಕೀರ್ತಿಗೆ ಭಾಜನರಾಗುವಂತೆ ಅಸೋಸಿಯೇಷನ್ ಜಿಲ್ಲಾ ಕಾರ್ಯದರ್ಶಿ ಸಂಗಣ್ಣ ಭಾಗ್ಯವಾಟ್, ಸೈಯದ್ ಅಫ್ಜಲ್ ಪಾಷಾ, ದೇವಪ್ಪ ಆತ್ಕೂರ್ ಇತರರು ಶುಭ ಹಾರೈಸಿದ್ದಾರೆ.