ಹನಿಟ್ರ್ಯಾಪ್ ಎನ್ನುವ ಟೈಂಬಾಂಬನ್ನು ಮಡಿಲಲ್ಲಿ ಕಟ್ಟಿಕೊಂಡ ಜನಪ್ರತಿನಿಧಿಗಳು

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ
ರಾಜ್ಯ ರಾಜಕಾರಣದಲ್ಲ್ ‘ಹನಿಟ್ರ್ಯಾಪ್’ ಮತ್ತೆ ಸದ್ದು ಮಾಡುತ್ತಿದೆ. ಈ ಹಿಂದೆ ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದ ಸಾಲು ಸಾಲು ನಾಯಕರು ಹನಿಟ್ರ್ಯಾಪ್ನಲ್ಲಿ ಸಿಲುಕಿ ಕೊಂಡಿದ್ದಲ್ಲದೆ, ಹಲವು ಸೀಡಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಬಿಜೆಪಿಯ ಸಂಸ್ಕೃತಿಯನ್ನು ಹರಾಜಿಗಿಟ್ಟಿದ್ದವು. ಈ ಹಿಂದಿನ ಸರಕಾರದ ಏಳು ಬೀಳುಗಳಲ್ಲಿ ಈ ಹನಿಟ್ರ್ಯಾಪ್ ಪಾತ್ರ ದೊಡ್ಡದಿದೆ ಎಂದು ಶಂಕಿಸಲಾಗಿತ್ತು. ರಮೇಶ್ಜಾರಕಿಹೊಳಿ, ಸದಾನಂದ ಗೌಡರಂತಹ ಹಿರಿಯ ಬಿಜೆಪಿ ನಾಯಕರ ಅಶ್ಲೀಲ ದೃಶ್ಯಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದರೆ, ಹನಿಟ್ರ್ಯಾಪ್ಗೊಳಗಾಗಿದ್ದ ಕೆಲವು ನಾಯಕರು ಅದನ್ನು ಹೇಳಿಕೊಳ್ಳಲಾಗದೆ ಒಳಗಿಂದೊಳಗೆ ಒತ್ತಡಗಳನ್ನು ಅನುಭವಿಸುತ್ತಿದ್ದರು. ಈ ಟ್ರ್ಯಾಪ್ಗಳು ಅಂತಿಮವಾಗಿ ದೇವೇಗೌಡರ ಕುಟುಂಬವನ್ನೇ ಬಲಿತೆಗೆದುಕೊಂಡಿತು. ದೇವೇಗೌಡರ ಪುತ್ರ ರೇವಣ್ಣ ಮತ್ತು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋಗಳು ರಾಷ್ಟ್ರಮಟ್ಟದಲ್ಲಿ ಚರ್ಚೆಯಾಯಿತು ಮಾತ್ರವಲ್ಲ, ಅದು ಅವರ ರಾಜಕೀಯ ಭವಿಷ್ಯವನ್ನೇ ಆಪೋಷನ ತೆಗೆದುಕೊಂಡಿತು. ಇದೀಗ ಆಡಳಿತ ಪಕ್ಷದೊಳಗಿರುವ ರಾಜಕೀಯ ನಾಯಕರೇ ‘ನಮ್ಮನ್ನು ಹನಿಟ್ರ್ಯಾಪ್’ ಮಾಡಲಾಗಿದೆ ಎಂದು ವಿಧಾನಸಭೆಯಲ್ಲಿ ಗದ್ದಲ ಎಬ್ಬಿಸಿದ್ದಾರೆ. ರಾಜ್ಯ ಮತ್ತು ಕೇಂದ್ರದ ಬೇರೆ ಬೇರೆ ಪಕ್ಷಗಳಿಗೆ ಸೇರಿದ 40ಕ್ಕೂ ಅಧಿಕ ರಾಜಕೀಯ ನಾಯಕರು ಹನಿಟ್ರ್ಯಾಪ್ಗೆ ಬಲಿಯಾಗಿದ್ದು, ಅವರನ್ನು ಬ್ಲ್ಯಾಕ್ಮೇಲ್ ಮಾಡಲಾಗುತ್ತಿದೆ ಎನ್ನುವ ಆತಂಕವನ್ನು ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರು ವ್ಯಕ್ತಪಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಅವರ ಪುತ್ರ ಕೂಡ ಇದಕ್ಕೆ ದನಿಗೂಡಿಸಿದ್ದಾರೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದೊಳಗಿರುವ ನಾಯಕರು ಈ ಬಗ್ಗೆ ಜಂಟಿಯಾಗಿ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಯಬೇಕು ಎಂದು ಒತ್ತಾಯಿಸುತ್ತಿದ್ದಾರೆ.
ಈ ಹನಿಟ್ರ್ಯಾಪ್ನ ಹಿಂದೆ ಕೆಲವು ಬಲಿಷ್ಠ ರಾಜಕಾರಣಿಗಳಿದ್ದಾರೆ ಎಂದು ಸಂಶಯಿಸಲಾಗುತ್ತಿದೆ. ಇದೇ ಸಂದರ್ಭದಲ್ಲಿ, ಕಾಂಗ್ರೆಸ್ನ ಹಿರಿಯ ರಾಜಕಾರಣಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆರೋಪಗಳಿಗೆ ಪ್ರತಿಕ್ರಿಯಿಸಿದ್ದು, ‘‘ಹನಿಟ್ರ್ಯಾಪ್ ಮಾಡುವವರು ಸುಮ್ಮನೆ ನಿಮ್ಮ ಬಳಿಗೆ ಬರುತ್ತಾರೆಯೆ? ನೀವು ಹಲೋ ಎಂದಾಗಷ್ಟೇ ಅವರೂ ಹಲೋ ಎನ್ನುತ್ತಾರೆ. ನೀವು ಪ್ರತಿಕ್ರಿಯೆ ನೀಡಿದರೆ ಮಾತ್ರ ಅವರು ಅದನ್ನು ಬಳಸಿಕೊಳ್ಳುತ್ತಾರೆ. ಈ ಬಗ್ಗೆ ತನಿಖೆಯಾಗಲಿ. ನಿಜವಾದ ಅಪರಾಧಿಗಳಿಗೆ ಶಿಕ್ಷೆಯಾಗಲಿ’’ ಎಂದು ಹೇಳಿದ್ದಾರೆ. ಹನಿಟ್ರ್ಯಾಪ್ಗೆ ಸಂಬಂಧಿಸಿ ಕೆಲವರು ಡಿಕೆಶಿ ಗುಂಪನ್ನು ಅನುಮಾನಿಸುತ್ತಿರುವುದರಿಂದ ಅವರು ನಿಷ್ಠುರವಾಗಿ ಪ್ರತಿಕ್ರಿಯಿಸಿದ್ದಾರೆ. ಒಂದಂತೂ ನಿಜ. ಹನಿಟ್ರ್ಯಾಪ್ನ ಮೊದಲ ತಪ್ಪು ಸಂಭವಿಸಿರುವುದು ಅದಕ್ಕೆ ಬಲಿಯಾದ ಶಾಸಕರ ಭಾಗದಿಂದಲೇ. ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳು ಹಣ ಮತ್ತು ಅಧಿಕಾರದ ಮದದಿಂದ ನೈತಿಕ ಗಡಿಗಳನ್ನು ದಾಟಲು ತುದಿಗಾಲಿನಲ್ಲಿ ನಿಂತಾಗ ಅವರನ್ನು ದುರುಪಯೋಗ ಪಡಿಸಲು ದುಷ್ಕರ್ಮಿಗಳು ಹೊಂಚು ಹಾಕಿ ಕೂತಿರುತ್ತಾರೆ. ತಮ್ಮ ಹುದ್ದೆಯ ಘನತೆಯನ್ನು ಅರಿತು ತಮಗೆ ತಾವೇ ನೈತಿಕ ಗಡಿಗಳನ್ನು ಹಾಕಿಕೊಳ್ಳದೇ ಇದ್ದಾಗ ಇಂತಹ ಅನಾಹುತಗಳು ಸಂಭವಿಸುತ್ತವೆ. ಮೊತ್ತ ಮೊದಲು, ಇಂತಹ ಅಶ್ಲೀಲ, ಅನೈತಿಕ ಚಟುವಟಿಕೆಗಳಲ್ಲಿ ಸಾರ್ವಜನಿಕ ವ್ಯಕ್ತಿಗಳು ಗುರುತಿಸಿಕೊಳ್ಳುವುದು ಎಷ್ಟು ಸರಿ? ಎನ್ನುವ ಪ್ರಶ್ನೆ ಚರ್ಚೆಗೊಳಗಾಗಬೇಕಾಗಿದೆ. ಸಾರ್ವಜನಿಕ ವೇದಿಕೆಗಳಲ್ಲಿ ಸಂಸ್ಕೃತಿಯ ಕುರಿತಂತೆ, ನೈತಿಕತೆಯ ಕುರಿತಂತೆ ಉದ್ದುದ್ದ ಉಪದೇಶಗಳನ್ನು ಬಿಗಿಯುವ ರಾಜಕೀಯ ನಾಯಕರು ತಮ್ಮ ಖಾಸಗಿ ಬದುಕಿನಲ್ಲೂ ಅದನ್ನು ಅಳವಡಿಸಿಕೊಳ್ಳಬೇಕಾಗುತ್ತದೆ. ಸಾರ್ವಜನಿಕವಾಗಿ ಯಾವುದೋ ಹೆಣ್ಣು ಮಗಳು ಇನ್ನಾವುದೋ ಧರ್ಮ, ಜಾತಿಯ ಹುಡುಗನೊಂದಿಗೆ ಓಡಾಡಿದರೆ ಅದನ್ನು ಮುಂದಿಟ್ಟುಕೊಂಡು ಗದ್ದಲ ಎಬ್ಬಿಸುವ ರಾಜಕೀಯ ನಾಯಕರು, ತಮ್ಮ ಖಾಸಗಿ ಕೋಣೆಯೊಳಗೆ ಸಂಸ್ಕೃತಿ, ನೈತಿಕತೆಗೆ ಎಷ್ಟು ಬದ್ಧರಾಗಿದ್ದಾರೆ ಎನ್ನುವುದಕ್ಕೆ ಹನಿಟ್ರ್ಯಾಪ್ ಉತ್ತರವಾಗಿದೆ. ರಾಜಕಾರಣಿಗಳ ಈ ಆಷಾಢಭೂತಿತನವನ್ನು ಹನಿಟ್ರ್ಯಾಪ್ ಮೂಲಕ ದುಷ್ಕರ್ಮಿಗಳು ಬಳಸಿಕೊಳ್ಳುತ್ತಿದ್ದಾರೆ. ಕೆಲವೊಮ್ಮೆ ಪಕ್ಷಗಳ ಮುಖಂಡರೇ ಶಾಸಕರು, ಸಂಸದರನ್ನು ಹನಿಟ್ರ್ಯಾಪ್ಗೆ ಬೀಳಿಸಿ ಅವರನ್ನು ತಮ್ಮ ನಿಯಂತ್ರಣದೊಳಗೆ ಇರಿಸಿಕೊಳ್ಳಲು ಯತ್ನಿಸುತ್ತಾರೆ. ಅದನ್ನು ತಮ್ಮ ರಾಜಕೀಯ ದುರುದ್ದೇಶಗಳಿಗಾಗಿ ಬ್ಲ್ಯ್ಲಾಕ್ಮೇಲ್ಗೆ ಬಳಸುವ ರಾಜಕೀಯ ಮುಖಂಡರ ಬಗ್ಗೆಯೂ ಹಲವರು ಶಂಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಹನಿಟ್ರ್ಯಾಪ್ ಇಂದು ಬರೇ ರಾಜ್ಯವನ್ನು ಮಾತ್ರವಲ್ಲ, ಇಡೀ ರಾಷ್ಟ್ರಮಟ್ಟದ ರಾಜಕೀಯವನ್ನು ನಿಯಂತ್ರಿಸುತ್ತಿದೆ ಎಂದು ಅನುಮಾನಪಡಲಾಗುತ್ತಿದೆ.
ಯಾರ ಸೀಡಿಗಳು ಬಹಿರಂಗವಾಗುತ್ತದೆಯೋ ಅವರ ವಿರುದ್ಧವಷ್ಟೇ ಕಲ್ಲುತೂರಾಟ ನಡೆಯುತ್ತದೆ. ಆದರೆ ಬಿಡುಗಡೆಯಾದ ಸೀಡಿಗಳಿಗಿಂತಲೂ ಬಿಡುಗಡೆಯಾಗದ ಸೀಡಿಗಳಲ್ಲಿ ಸಿಲುಕಿಕೊಂಡಿರುವ ರಾಜಕೀಯ ನಾಯಕರೇ ಹೆಚ್ಚು ಅಪಾಯಕಾರಿಗಳಾಗಬಲ್ಲರು ಎನ್ನುವ ಅಂಶವನ್ನು ನಾವು ಮರೆಯಬಾರದು ಮತ್ತು ಇವರ ಜೊತೆಗೆ ನಡೆಯುವ ಬ್ಲ್ಯಾಕ್ಮೇಲ್ಗಳು ಕೇವಲ ಹಣ ಅಥವಾ ರಾಜಕೀಯಕ್ಕಷ್ಟೇ ಸೀಮಿತವಾಗಿರಬೇಕೆಂದೇನೂ ಇಲ್ಲ. ಇತ್ತೀಚೆಗೆ ಹನಿಟ್ರ್ಯಾಪ್ಗೆ ಬಲಿಯಾಗಿ ಪಾಕಿಸ್ತಾನವೂ ಸೇರಿದಂತೆ ವಿದೇಶಗಳಿಗೆ ದೇಶದ ರಹಸ್ಯ ಮಾಹಿತಿಗಳನ್ನು ಸೋರಿಕೆ ಮಾಡಿದ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಎರಡು ದಿನಗಳ ಹಿಂದೆ, ಬಿಇಎಲ್ ನೌಕರ ದೀಪರಾಜ್ ಚಂದ್ರ ಎಂಬ ಬೆಂಗಳೂರಿನ ತರುಣನನ್ನು ಪಾಕಿಸ್ತಾನಕ್ಕೆ ರಹಸ್ಯ ಮಾಹಿತಿ ಸೋರಿಕೆ ಆರೋಪದಲ್ಲಿ ಬಂಧಿಸಲಾಗಿತ್ತು. ದೇಶದ ವಿವಿಧೆಡೆಗಳಲ್ಲಿ ಇಂತಹ ಬಂಧನಗಳು ನಡೆಯುತ್ತಲೇ ಇವೆ. ಈ ಹನಿಟ್ರ್ಯಾಪ್ಗಳು ನೂರಾರು ಜನರನ್ನು ದೇಶದ ವಿರುದ್ಧ ಕೆಲಸ ಮಾಡುವ ಸ್ಥಿತಿಗೆ ತಂದು ಇಳಿಸಿದೆ. ಇದೀಗ ಸರಕಾರದೊಳಗಿರುವ ರಾಜಕಾರಣಿಗಳೇ ‘ನಾವು ಹನಿಟ್ರ್ಯಾಪ್ಗೆ ಒಳಗಾಗಿದ್ದೇವೆ’ ಎಂದು ಹೇಳಿಕೊಳ್ಳುತ್ತಿದ್ದಾರೆ. ಹೀಗೆ ಹನಿಟ್ರ್ಯಾಪ್ಗೆ ಬಲಿಯಾದವರು, ದುಷ್ಕರ್ಮಿಗಳ ಬ್ಲ್ಯಾಕ್ಮೇಲ್ಗೆ ಒಳಗಾಗಿ ನಾಡಿನ ಹಿತಾಸಕ್ತಿಯನ್ನು ಬಲಿಕೊಡುವುದಿಲ್ಲ ಎಂಬ ಬಗ್ಗೆ ಖಾತರಿಯೇನು? ಈ ಹಿಂದೆ ಮೈಸೂರಿನ ಸಂಸದರೊಬ್ಬರು ಸಂಸತ್ನೊಳಗೆ ನುಗ್ಗಲು ದುಷ್ಕರ್ಮಿಗಳಿಗೆ ಉಚಿತ ಪಾಸ್ ನೀಡಿದ ಉದಾಹರಣೆಯನ್ನೇ ತೆಗೆದುಕೊಳ್ಳೋಣ. ಹನಿ ಟ್ರ್ಯಾಪ್ಗೊಳಗಾದ ರಾಜಕಾರಣಿಗಳನ್ನು ಇಂತಹ ದೇಶದ್ರೋಹದ ಕೃತ್ಯಗಳಿಗೂ ಸುಲಭದಲ್ಲಿ ಬಳಸಿಕೊಳ್ಳಬಹುದು. ಹಾಗೆಯೇ, ಯಾವುದೇ ಅಭಿವೃದ್ಧಿ ಯೋಜನೆಗಳಿಗೆ ಸಂಬಂಧಿಸಿದ ಗುತ್ತಿಗೆಗಳನ್ನು ತಮ್ಮದಾಗಿಸಿಕೊಳ್ಳಲು ಅಥವಾ ಸರಕಾರದ ಯೋಜನೆಗಳ ದಿಕ್ಕು ತಪ್ಪಿಸಲು ಜನಪ್ರತಿನಿಧಿಗಳನ್ನು, ಸಚಿವರನ್ನು ದುಷ್ಕರ್ಮಿಗಳು ಬ್ಲ್ಯಾಕ್ಮೇಲ್ ಮಾಡುವ ಸಾಧ್ಯತೆಗಳು ಇಲ್ಲದಿಲ್ಲ.
ಆದುದರಿಂದ ಸರಕಾರದಲ್ಲಿ ಉನ್ನತ ಸ್ಥಾನದಲ್ಲಿರುವ ಹನಿಟ್ರ್ಯಾಪ್ಗೆ ಒಳಗಾಗಿರುವ ನಾಯಕರು ಮೊತ್ತ ಮೊದಲು ಮಾಡಬೇಕಾದ ಕೆಲಸ, ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಹನಿಟ್ರ್ಯಾಪ್ಗೆ ಒಳಗಾಗಿರುವುದನ್ನು ತನಿಖಾ ಸಂಸ್ಥೆಯ ಮುಂದೆ ಒಪ್ಪಿಕೊಳ್ಳುವುದು. ಆ ಬಳಿಕವಷ್ಟೇ ಸುಲಲಿತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸುವುದಕ್ಕೆ ಸಾಧ್ಯ. ಇಲ್ಲವಾದರೆ, ಬ್ಲಾಕ್ಮೇಲ್ಗೆ ಅಂಜಿ ಇನ್ನಷ್ಟು ಅಪರಾಧಗಳನ್ನು ಹೆಗಲ ಮೇಲೆ ಹೊತ್ತುಕೊಳ್ಳುವ ಅನಿವಾರ್ಯ ಸ್ಥಿತಿ ಅವರಿಗೆದುರಾಗಬಹುದು. ಅದು ಅವರನ್ನೂ, ನಾಡನ್ನೂ ದುರಂತದ ಕಡೆಗೆ ಕೊಂಡೊಯ್ಯುವ ಸಾಧ್ಯತೆಗಳಿವೆ. ‘ಹನಿಟ್ರ್ಯಾಪ್’ ಎನ್ನುವುದು ಯಾವ ಕ್ಷಣದಲ್ಲಿ ಬೇಕಾದರೂ ಸಿಡಿಯಬಹುದಾದ ಟೈಂಬಾಂಬ್. ಅದನ್ನು ಮಡಿಲಲ್ಲಿ ಕಟ್ಟಿಕೊಂಡು ರಾಜಕೀಯ ನಡೆಸುವುದೂ ಎಂದರೆ ಏಕಕಾಲದಲ್ಲಿ ತನ್ನನ್ನು, ನಾಡನ್ನು ಜೊತೆಯಾಗಿ ಬಲಿಕೊಡುವುದಾಗಿದೆ. ಆದುದರಿಂದ, ಹನಿಟ್ರ್ಯಾಪ್ಗೆ ಒಳಗಾಗಿರುವ ಬಗ್ಗೆ ಸ್ಪಷ್ಟವಿರುವ ಮತ್ತು ಈಗಾಗಲೇ ಬ್ಲ್ಯಾಕ್ಮೇಲ್ಗೆ ಒಳಗಾಗಿರುವ ರಾಜಕೀಯ ನಾಯಕರು ಸ್ವಯಂ ಮುಂದೆ ಬಂದು ರಾಜೀನಾಮೆ ನೀಡಿ, ತನಿಖೆಗೆ ಅವಕಾಶ ಮಾಡಿಕೊಡಬೇಕು.