ಅಸಲಂಕಾ ಶತಕ : ಬಾಂಗ್ಲಾದೇಶಕ್ಕೆ 280 ರನ್ ಗುರಿ

Update: 2023-11-06 12:27 GMT

Photo: cricketworldcup.com

ಹೊಸದಿಲ್ಲಿ: ಇಲ್ಲಿನ ಅರುಣ್ ಜೇಟ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಬಾಂಗ್ಲಾದೇಶ ಗೆಲುವಿಗೆ ಶ್ರೀಲಂಕಾ 280 ರನ್ ಗಳ ಸಾಧಾರಣ ಗುರಿ ನೀಡಿದೆ.

ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಟಾಸ್ ಗೆದ್ದ ಬಾಂಗ್ಲಾದೇಶ ಬೌಲಿಂಗ್ ಆಯ್ದುಕೊಂಡು , ಲಂಕನ್ನರಿಗೆ ಬ್ಯಾಟಿಂಗ್ ಆಹ್ವಾನ ನೀಡಿತು. ಇತ್ತಬ್ಯಾಟಿಂಗ್ ಗೆ ಬಂದ ಶ್ರೀಲಂಕಾ ಓಪನರ್ ಕುಸಾಲ್ ಪರೇರಾ ಕೇವಲ 5 ರನ್ ಗೆ ಮೊದಲ ಓವರ್ ನಲ್ಲಿಯೇ ಶರೀಫುಲ್ ಇಸ್ಲಾಂ ಎಸೆತದಲ್ಲಿ ವಿಕೆಟ್ ಕೀಪರ್ ಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡರು. ಇನ್ನೋರ್ವ ಬ್ಯಾಟರ್ ಪಾತುಮ್ ನಿಸಾಂಕ 41 ರನ್ ಬಾರಿಸಿ ತಂಝಿಮ್ ಹಸನ್ ಶಾಕಿಬ್ ಬೌಲಿಂಗ್ ನಲ್ಲಿ ಬೌಲ್ಡ್ ಆದರು. ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬಂದ ನಾಯಕ ಕುಸಾಲ್ ಮೆಂಡಿಸ್ 19 ರನ್ ಗಳಿಸಿ ಶಾಕಿಬ್ ಉಲ್ ಹಸನ್ ಗೆ ವಿಕೆಟ್ ಒಪ್ಪಿಸಿ ಟೂರ್ನಿಯಲ್ಲಿ ಮತ್ತೊಂದು ಕಳಪೆ ಆಟ ಪ್ರದರ್ಶಿಸಿದರು. ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾ ಗೋಷ್ಠಿಯಲ್ಲಿ ವಿರಾಟ್ ಕೊಹ್ಲಿ ಶತಕಕ್ಕೆ ಅಭಿನಂದಿಸುವಿರಾ ಎಂಬ ಪತ್ರಕರ್ತರ ಪ್ರಶ್ನೆಗೆ ನಾನು ಯಾಕೆ ಅಭಿನಂದಿಸಬೇಕು ಎಂಬ ಉಡಾಫೆ ಉತ್ತರ ನೀಡಿ ಕುಸಾಲ್ ಮೆಂಡಿಸ್ ತೀವ್ರ ಟೀಕೆಗೆ ಗುರಿಯಾಗಿದ್ದರು. ಬಳಿಕ ಬ್ಯಾಟಿಂಗ್ ಬಂದ ಸದೀರ ಸಮರವಿಕ್ರಮ 41 ರನ್ ಗಳಿಸಿ ಔಟ್ ಆದರೆ 6 ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಬರಬೇಕಿದ್ದ ಏಂಜಲೋ ಮಾಥ್ಯೂಸ್ ಬೌಲಿಂಗ್ ಎದುರಿಸದೆಯೇ ವಿಚಿತ್ರ ರೀತಿಯಲ್ಲಿ ಔಟ್ ಆದ ಪ್ರಸಂಗವು ನಡೆಯಿತು.ಸಮರವಿಕ್ರಮ ಔಟ್ ಆದ ಬಳಿಕ ಬ್ಯಾಟಿಂಗ್ ಬರ ಬೇಕಿದ್ದ ಮಾಥ್ಯೂಸ್ ತಮ್ಮ ಹೆಲ್ಮೆಟ್ ಹುಡುಕಾದದಲ್ಲಿದ್ದರಿಂದ ನಿಗದಿತ ಸಮಯದಲ್ಲಿ ಕ್ರೀಡಾಂಗಣಕ್ಕೆ ಬರಲಾಗಲಿಲ್ಲ ಪರಿಣಾಮ ಅಂಪೈರ್ ಅವರನ್ನು ಟೈಮ್ಡ್ ಔಟ್ ಎಂದು ಘೊಷಿಸಿದರು.

ಟೈಮ್ಡ್ ಔಟ್ ಎಂದರೆ :ಒಂದು ವಿಕೆಟ್ ಪತನಗೊಂಡಾಗ ಅಥವಾ ಬ್ಯಾಟರ್ ಒಬ್ಬರು ಯಾವುದೋ ಕಾರಣಕ್ಕೆ ಮೈದಾನದಿಂದ ಹೊರಹೋಗಲು ನಿರ್ಧರಿಸಿದಲ್ಲಿ ಹಾಗಾದ ಮೂರು ನಿಮಿಷಗಳೊಳಗೆ ಹೊಸ ಬ್ಯಾಟರ್ ಕ್ರೀಸಿಗೆ ಬಂದು ಮುಂದಿನ ಬಾಲ್ ಎದುರಿಸಲು ಸಜ್ಜಾಗಬೇಕು. ಇಲ್ಲದೇ ಹೋದಲ್ಲಿ ಟೈಮ್ಡ್ ಔಟ್ ಘೋಷಿಸಲಾಗುತ್ತದೆ..

ಶ್ರೀಲಂಕಾ ತಂಡ 24.2 ಓವರ್ ನಲ್ಲಿ135 ರನ್ ಗೆ ತನ್ನ ಪ್ರಮುಖ ಐದು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸಂದರ್ಭದಲ್ಲಿ ಜೊತೆಯಾದ ಚರಿತ್ ಅಸಲಂಕ ಹಾಗೂ ದನಂಜಯ ಡಿಸಿಲ್ವ ಜೋಡಿ 78 ರನ್ ಗಳ ಜೊತೆಯಾಟದ ಮೂಲಕದ ತಂಡವನ್ನು ಚೇತರಿಕೆಯತ್ತ ಕೊಂಡೊಯ್ದರು. ಲಂಕಾ ಪರ ದನಂಜಯ ಡಿಸಿಲ್ವ34 ರನ್ ಬಾರಿಸಿ ಉತ್ತಮ ಜೊತೆಯಾಟ ನೀಡುತ್ತಿದ್ದ ಸಂದರ್ಭ ಮಿಂಚಿನ ಸ್ಟಂಪ್ ವಿಕೆಟ್ ಮೂಲಕ ಮುಶ್ಪಿಕುರ್ ರಹೀಮ್, ಡಿಸಿಲ್ವ ವಿಕೆಟ್ ಕೆಡವಿದರು. ತಂಡದ ಪರ ಏಕಾಂಗಿ ಅದ್ಭುತ ಪ್ರದರ್ಶನ ನೀಡಿದ ಚರಿತ್ ಅಸಲಂಕ 105 ಎಸೆತಗಳಲ್ಲಿ 6 ಬೌಂಡರಿ 5 ಸಿಕ್ಸರ್ ಸಹಿತ 108 ರನ್ ಬಾರಿಸಿ ಬಾಂಗ್ಲಾ ಬೌಲರ್ ಗಳನ್ನು ದಂಡಿಸಿದರು. ಪರಿಣಾಮ ಲಂಕಾ ಸ್ಪರ್ದಾತ್ಮಕ ಮೊತ್ತ ಪೇರಿಸಲು ನೆರವಾದರು. ಮಹೇಶ ತೀಕ್ಷಣ 22 ,ಚಮೀರ 4 ರನ್ ಗಳಿಸಿದರೆ ರಜಿತಾ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು.

ಬಾಂಗ್ಲಾದೇಶ ಪರ ತಂಝಿಮ್ ಹಸನ್ 3 ವಿಕೆಟ್ ಪಡೆದರೆ ನಾಯಕ ಶಾಕಿಬ್ ಉಲ್ ಹಸನ್ , ಶರೀಫುಲ್ ಇಸ್ಲಾಂ 2 ವಿಕೆಟ್ ಪೆಡೆದುಕೊಂಡರು ಹಾಗೂ ಹಸನ್ ಮಿರಾಝ್ ಒಂದು ವಿಕೆಟ್ ಕಬಳಿಸಿದರು

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News