ಕಾಂಗ್ರೆಸ್‌ನಿಂದ ಡಾ. ಸೈಯದ್ ನಾಸಿರ್ ಹುಸೇನ್ ಮತ್ತೆ ರಾಜ್ಯಸಭೆಗೆ

Update: 2024-02-14 15:46 GMT

ಬೆಂಗಳೂರು: ಡಾ. ಸೈಯದ್ ನಾಸಿರ್ ಹುಸೇನ್ ಅವರನ್ನು 2024 ರ ರಾಜ್ಯಸಭಾ ಚುನಾವಣೆಗೆ ಕರ್ನಾಟಕದಿಂದ ಎರಡನೇ ಅವಧಿಗೆ ಕಾಂಗ್ರೆಸ್‌ನಿಂದ ಮರು ನಾಮನಿರ್ದೇಶನ ಮಾಡಲಾಗಿದೆ.

ಪಕ್ಷದ ನಿಷ್ಠಾವಂತ ಕಾರ್ಯಕರ್ತ, ರಾಜಕೀಯ ನಿಪುಣ ಮತ್ತು ಪಕ್ಷದ ವಕ್ತಾರ ನಾಸಿರ್ ಹುಸೇನ್ ಅವರು ರಾಜ್ಯಸಭೆಯಲ್ಲಿ ಸಾಮಾನ್ಯ ಜನರ ಸಮಸ್ಯೆಗಳ ಮೇಲೆ ಗಮನ ಸೆಳೆಯುವ ಕೆಲಸ ನಿರಂತರವಾಗಿ ಮಾಡಿದ್ದರು. ನಿರುದ್ಯೋಗ, ಬೆಲೆ ಏರಿಕೆ, ಅಗತ್ಯ ವಸ್ತುಗಳ ಮೇಲಿನ ಜಿಎಸ್‌ಟಿ, ಚೀನಾದ ಆಕ್ರಮಣ, ಮಣಿಪುರ ಜನಾಂಗೀಯ ಹಿಂಸಾಚಾರ, ದುರುಪಯೋಗ ಮತ್ತು ಪ್ರಸ್ತುತ ಸರಕಾರದ ಹಗರಣಗಳಂತಹ ದೇಶದ ಮೇಲೆ ಪರಿಣಾಮ ಬೀರುವ ನೈಜ ಮತ್ತು ಸಂಬಂಧಿತ ವಿಷಯಗಳಿಗೆ ಅವರು ಧ್ವನಿಯಾಗಿದ್ದರು. ಬಳ್ಳಾರಿ ಮೂಲದವರಾದ ಅವರು ಕರ್ನಾಟಕದ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆ ಧ್ವನಿಯೆತ್ತಿದ್ದರು.

ನಾಸಿರ್ ಹುಸೇನ್ ಅವರು ಪ್ರತಿಪಕ್ಷಗಳನ್ನು ಸಂಸತ್ತಿನಲ್ಲಿ ಸಕ್ರಿಯವಾಗಿ ಸಜ್ಜುಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕೃಷಿ ಕಾನೂನುಗಳ ಆಂದೋಲನ, ಕಾರ್ಮಿಕ ಸಂಹಿತೆಗಳ ಪ್ರತಿಭಟನೆಗಳು ಮತ್ತು ಸಂಸತ್ತಿನಲ್ಲಿ ಸಿಎಎ ಮತ್ತು ಎನ್‌ಆರ್‌ಸಿ ಯಂತಹ ಅಸಂವಿಧಾನಿಕ ಕಾನೂನುಗಳ ಬಗ್ಗೆ ಚರ್ಚೆಯಲ್ಲಿ ವಿರೋಧ ಪಕ್ಷಗಳನ್ನು ಉತ್ತಮವಾಗಿ ಸಂಘಟಿಸಿ, ದನಿಯೆತ್ತಿದ್ದರು. ಸಂಸತ್ತಿನೊಳಗೆ ಸಮಸ್ಯೆಗಳನ್ನು ಪ್ರಸ್ತಾಪಿಸಿ ಮೋದಿ ಸರಕಾರವನ್ನು ಕಟಕೆಯಲ್ಲಿ ಟೀಕಿಸಿದ್ದಕ್ಕಾಗಿ ಅವರನ್ನು ಇತರ ವಿರೋಧ ಪಕ್ಷದ ಸಂಸದರೊಂದಿಗೆ ಮೂರು ಬಾರಿ ಅಮಾನತುಗೊಳಿಸಲಾಗಿತ್ತು.

2018 ರಲ್ಲಿ ರಾಜ್ಯಸಭೆಗೆ ಆಯ್ಕೆಯಾದ ಡಾ. ನಾಸಿರ್ ಹುಸೇನ್ ಅವರನ್ನು 2020 ರಲ್ಲಿ ವಿಪ್ ಆಗಿ ನೇಮಿಸಲಾಯಿತು. ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಮಲ್ಲಿಕಾರ್ಜುನ ಖರ್ಗೆಯವರ ಚುನಾವಣಾ ಪ್ರಚಾರದ ವ್ಯವಸ್ಥಾಪಕರಾಗಿದ್ದರು. ಆ ಬಳಿಕ ಅವರು ಕಾಂಗ್ರೆಸ್ ಅಧ್ಯಕ್ಷರ ಸಂಯೋಜಕರಾಗಿ ನೇಮಕಗೊಂಡರು.

ಅವರ ಕಠಿಣ ಪರಿಶ್ರಮ, ಪ್ರಾಮಾಣಿಕತೆ ಮತ್ತು ಸಮರ್ಪಣಾ ಮನೋಭಾವ ಕಾಂಗ್ರೆಸ್ ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯಲ್ಲಿ (ಸಿಡಬ್ಲ್ಯೂಸಿ) ಸ್ಥಾನ ದೊರಕಿಸಿ ಕೊಟ್ಟಿತು.

ಕೋವಿಡ್ ಸಾಂಕ್ರಾಮಿಕ ಬಿಕ್ಕಟ್ಟಿನ ಸಂದರ್ಭದಲ್ಲಿ ಅವರ ನಾಯಕತ್ವವನ್ನು ಪಕ್ಷ ಮತ್ತು ಜನರು ಗಮನಿಸಿದ್ದಾರೆ. ದಿಲ್ಲಿಯ ಪಕ್ಷದ ಪ್ರಧಾನ ಕಚೇರಿಯಿಂದ ದೇಶದಾದ್ಯಂತ ಸಂತ್ರಸ್ತ ಜನರನ್ನು ತಲುಪುವ ಮಹತ್ತರ ಕಾರ್ಯವನ್ನು ಅವರು ಮಾಡಿದ್ದಾರೆ.

ವಿದ್ಯಾರ್ಥಿ ಜೀವನದಲ್ಲೇ ಹೋರಾಟಕ್ಕೆ ಧುಮುಕಿದ ಅವರು, ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು. ಅವರು ವಿದ್ಯಾರ್ಥಿ ಜೀವನ ಮತ್ತು ಯುವ ರಾಜಕೀಯದ ತಮ್ಮ ದೀರ್ಘಾವಧಿಯಲ್ಲಿ ದಿಲ್ಲಿಯಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು. ಯುಪಿಎ ಅವಧಿಯಲ್ಲಿ ಎರಡು ಕಾರ್ಮಿಕ ಮಂಡಳಿಗಳ ಅಧ್ಯಕ್ಷರಾಗಿ ಅನುಭವವನ್ನು ಗಳಿಸಿದರು.

ಜವಾಹರಲಾಲ್ ವಿಶ್ವವಿದ್ಯಾನಿಲಯದಿಂದ ಅಂತರಾಷ್ಟ್ರೀಯ ಅಧ್ಯಯನದಲ್ಲಿ ಡಾಕ್ಟರೇಟ್ ಪಡೆದಿರುವ ನಾಸಿರ್ ಹುಸೇನ್ ಅವರು ರಾಜಕೀಯ ವಿಷಯಗಳಲ್ಲಿ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ. ಪಕ್ಷದ ರಾಷ್ಟ್ರೀಯ ವಕ್ತಾರರಾಗಿ, ಅವರು ದೂರದರ್ಶನ ಚಾನೆಲ್‌ಗಳು ಮತ್ತು ಪತ್ರಿಕಾಗೋಷ್ಠಿಗಳಲ್ಲಿ ಅನೇಕ ದೇಶೀಯ ಮತ್ತು ಅಂತರರಾಷ್ಟ್ರೀಯ ಸಮಸ್ಯೆಗಳ ಕುರಿತು ಪಕ್ಷದ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾಂಸ್ಥಿಕ ವ್ಯವಹಾರಗಳಲ್ಲಿ ದಿವಂಗತ ಆಸ್ಕರ್ ಫೆರ್ನಾಂಡಿಸ್ ಅವರಿಂದ ಮಾರ್ಗದರ್ಶನ ಪಡೆದ ಹುಸೇನ್ ಅವರು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹುದ್ದೆಗಳಲ್ಲಿ ಕೆಲಸ ಮಾಡುವ ಅವಕಾಶವನ್ನು ಪಡೆದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News