ಯಾದಗಿರಿ | ಪ.ಜಾ, ಪ.ಪಂ ಜನಾಂಗದ ಮೇಲೆ ಹೆಚ್ಚು ದೌರ್ಜನ್ಯ ನಡೆಯುತ್ತಿರುವ ಗ್ರಾಮಗಳ ಮೇಲೆ ನಿಗಾ ಇಡಿ : ಜಿಲ್ಲಾಧಿಕಾರಿ

Update: 2025-03-17 20:42 IST
Photo of Metting
  • whatsapp icon

ಯಾದಗಿರಿ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಜನಾಂಗದ ಮೇಲೆ ದೌರ್ಜನ್ಯ ಹೆಚ್ಚಿರುವ ಕಡೆ ವಿಶೇಷ ನಿಗಾವಹಿಸುವಂತೆ ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರು ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಅನುಸೂಚಿತ ಜಾತಿ, ಅನುಸೂಚಿತ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995 ರಲ್ಲಿ, ನಿಯಮ 17 ರ ರಿತ್ಯ ರಚಿಸಲಾದ ಜಿಲ್ಲಾ ಜಾಗೃತಿ ಸಮಿತಿಯ ತ್ರೈಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಈ ಜನಾಂಗದ ಮೇಲೆ ಹೆಚ್ಚಿನ ದೌರ್ಜನ್ಯ ನಡೆಯುತ್ತಿರುವ ಗ್ರಾಮ ಮತ್ತು ಪ್ರದೇಶಗಳನ್ನು ಗುರುತಿಸಿ ಸೂಕ್ತ ನಿಗಾ ಇಡಬೇಕು. ದೌರ್ಜನ್ಯ ನಡೆದ ತಕ್ಷಣ ಕಾನೂನು ಹಾಗೂ ತಮ್ಮ ಕಾರ್ಯ ವ್ಯಾಪ್ತಿಯಲ್ಲಿ ನಿಗದಿತ ತಂಡಗಳೊಂದಿಗೆ ಆಯಾ ಸ್ಥಳಕ್ಕೆ ಭೇಟಿ ನೀಡಿ, ಅವಶ್ಯಕ ಕ್ರಮ ಕೈಗೊಳ್ಳಬೇಕು. ಸಾಕ್ಷಾಧಾರಗಳೊಂದಿಗೆ ಅಧಿಕಾರಿಗಳು ಪಾರದರ್ಶಕವಾಗಿ ಕಾರ್ಯನಿರ್ವಹಿಸಿ ಸಂಬಂಧಿಸಿದವರಿಗೆ ನ್ಯಾಯ ಒದಿಗಿಸಲು ಜವಾಬ್ದಾರಿಯಿಂದ ಕಾರ್ಯನಿರ್ವಹಿಸುವಂತೆ ಸೂಚನೆ ನೀಡಿದರು.

ಅದರಂತೆ ಅನುಸೂಚಿತ ಜಾತಿ, ಅನುಸೂಚಿತ ಪಂಗಡ ದೌರ್ಜನ್ಯ ನಿಯಂತ್ರಣ ಕಾಯ್ದೆ 1995ರ ಉಲ್ಲಂಘನೆ ಆಗದಂತೆ ಎಚ್ಚರಿಕೆ ವಹಿಸಬೇಕು.

ಈ ಜನಾಂಗದ ಮೇಲೆ ದೌರ್ಜನ್ಯ ನಡೆದ ತಕ್ಷಣ ತಾಲೂಕು ಮಟ್ಟದ ತಂಡಗಳಲ್ಲಿರುವ ಆಯುಕ್ತರು, ತಹಶೀಲ್ದಾರರು, ನಗರ ಸಂಸ್ಥೆಗಳ ಮುಖ್ಯಾಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಸೂಕ್ತ ಪರಿಶೀಲನೆ ನಡೆಸಿ, ಕಾನೂನಿನ ರೀತಿಯ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳ ಮಧ್ಯೆ ಸಮನ್ವಯತೆ ಇರಬೇಕು. ಜಾಗೃತಿ ಸಮಿತಿ ಸದಸ್ಯರು ಎತ್ತುವಂತಹ ವಿಶೇಷ ವಿಷಯಗಳ ಬಗ್ಗೆ ಗಂಭೀರವಾಗಿ ಪರಿಗಣಿಸಿ ಅವಶ್ಯಕ ಕ್ರಮ ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು.

ಪದೇ ಪದೇ ದೌರ್ಜನ್ಯ ನಡೆಯುವ ಸ್ಥಳಗಳಲ್ಲಿ ಸೂಕ್ತ ಜಾಗೃತಿ ಮೂಡಿಸುವ ಕಾರ್ಯವನ್ನು ಸಂಬಂಧಿಸಿದ ಅಧಿಕಾರಿಗಳು ಮತ್ತು ಜಾಗೃತಿ ಸಮಿತಿಯ ಸದಸ್ಯರು ಕೂಡ ಮಾಡಬೇಕು. ದೌರ್ಜನ್ಯಕ್ಕೆ ಒಳಗಾಗುವವರೆಗೆ ಸಾಂತ್ವನ, ರಕ್ಷಣೆ, ಪರಿಹಾರ ಮತ್ತು ಪಾರದರ್ಶಕವಾಗಿ ತನಿಖೆ ನಡೆಸಿ, ನ್ಯಾಯ ಒದಗಿಸುವ ಕಾರ್ಯ ಮಾಡುವಂತೆ ಅವರು ಸಲಹೆ ನೀಡಿದರು.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಗ್ರಾಮಸ್ಥರು ಸೌಹಾರ್ದಯುತವಾಗಿ ಜೀವನ ನಡೆಸಬೇಕು. ಯಾವುದೇ ರೀತಿಯ ಮತ ಭೇದ, ಭೇದಭಾವ ಇರದಂತೆ ಮತ್ತು ದೌರ್ಜನ್ಯ ನಡೆಯದಂತೆ ಮುನ್ನೆಚ್ಚರಿಕೆ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ, ಸೂಚಿಸಿದರು.

ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಿಂದ ಹಲವು ಬೇಡಿಕೆಗಳು ಬಂದಿವೆ. ಸ್ಮಶಾನಭೂಮಿ, ಸ್ವಚ್ಛತೆ ವಿವಿಧ ಠಾಣೆಗಳಲ್ಲಿನ ಪ್ರಕರಣಗಳ ಇತ್ಯರ್ಥ, ಸಕಾಲಕ್ಕೆ ಕ್ರಮ, ನೊಂದ ಸಂತ್ರಸ್ತರಿಗೆ ಪರಿಹಾರ, ವಿವಿಧ ಭವನಗಳ ನಿರ್ಮಾಣ, ಹೀಗೆ ಹಲವು ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಬೇಕು. ಪ್ರತಿ ಗ್ರಾಮದಲ್ಲಿ ರುದ್ರಭೂಮಿ ಕಾಯ್ದಿರಿಸಬೇಕು. ಲಭ್ಯವಿಲ್ಲದಿದ್ದಲ್ಲಿ ಪಕ್ಕದ ಗ್ರಾಮಗಳಲ್ಲಿ ಜಮೀನು ಗುರುತಿಸಿ, ಈ ಸೌಲಭ್ಯ ಕಲ್ಪಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ಯಾದಗಿರಿ ಜಿಲ್ಲೆಯಲ್ಲಿ ದಿನಾಂಕ 1-1- 2025 ರಿಂದ 10.3.2025 ರವರೆಗೆ ದೌರ್ಜನ್ಯದಲ್ಲಿ ನೊಂದ ಒಟ್ಟು 41 ಸಂತ್ರಸ್ತರಿಗೆ 1. 25 ಕೋ.ರೂಗಳ ಪರಿಹಾರ ಧನ ವಿತರಿಸಲಾಗಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕರಾದ ಶ್ರೀ ಚನ್ನಬಸಪ್ಪ ಅವರು ಸೂಕ್ತ ಮಾಹಿತಿ ನೀಡಿದರು. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀ ಲವೀಶ್ ಒರಾಡಿಯ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಣೆಶ್, ಡಿವೈಎಸ್ಪಿ ಅರುಣಕುಮಾರ್, ಜಾಗೃತಿ ಸಮಿತಿಯ ಸದಸ್ಯರಾದ ಮರೆಪ್ಪ ಚಟ್ಟರ್ಕರ್, ನಿಂಗಪ್ಪ, ರವಿಕುಮಾರ್, ಮಲ್ಲಪ್ಪ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News