ಉಪ್ಪಿನಂಗಡಿ| ಉದ್ಯೋಗ ನೀಡುವುದಾಗಿ ಮಹಿಳೆಗೆ ವಂಚನೆ ಆರೋಪ; ದೂರು ದಾಖಲು

Update: 2024-10-13 14:17 GMT

ಉಪ್ಪಿನಂಗಡಿ: ಉದ್ಯೋಗ ನೀಡುವುದಾಗಿ ಗೆಳತಿಯಿಂದಲೇ 13,11,600 ರೂ. ಪಡೆದು ವಂಚಿಸಿದ ಘಟನೆಗೆ ಸಂಬಂಧಿಸಿ ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಲಾಗಿದೆ.

ಸಚಿತಾ ರೈ ಎಂಬಾಕೆಯ ವಿರುದ್ಧ  ರಕ್ಷಿತಾ ಎಂಬವರು ಪೊಲೀಸರಿಗೆ  ದೂರು ನೀಡಿದ್ದು, ಕೇರಳ ರಾಜ್ಯದ ನೀರಾವರಿ ಇಲಾಖೆ ಅಥವ ಎಸ್‍ಬಿಐ ಬ್ಯಾಂಕಿನಲ್ಲಿ ಉದ್ಯೋಗ ಒದಗಿಸುವ ಅವಕಾಶವಿದೆ ಎಂದು ನಂಬಿಸಿ , ವಿವಿಧ ನೆಪಗಳನ್ನು ಮುಂದಿರಿಸಿ ವಿವಿಧ ಕಂತುಗಳಲ್ಲಿ ಒಟ್ಟು 13,11,600 ರೂ. ಪಡೆಯಲಾಗಿದೆ ಎಂದೂ, ಸದ್ರಿ ಹಣದ ಪೈಕಿ 8,66,868 ನ್ನು ಬ್ಯಾಂಕ್ ಖಾತೆಯ ಮೂಲಕ ವರ್ಗಾಯಿಸಲಾಗಿದ್ದರೆ, ಉಳಿಕೆ ಮೊತ್ತವನ್ನು ಗೂಗಲ್ ಪೇ ಮೂಲಕ ಪಾವತಿಸಿರುತ್ತೇನೆಂದು ದೂರಿನಲ್ಲಿ ತಿಳಿಸಿದ್ದಾರೆ.

ತನ್ನ ಕಾಲೇಜು ದಿನಗಳಲ್ಲಿ ಪುತ್ತೂರಿನ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಸಚಿತಾ ರೈ ಪ್ರಸಕ್ತ ವಿವಾಹಿತರಾಗಿ ಕಾಸರಗೋಡಿನ ಪೆರ್ಲದಲ್ಲಿ ಶಿಕ್ಷಕಿಯಾಗಿದ್ದು, ಅಲ್ಲಿನ ಆಡಳಿತ ಪಕ್ಷದ ಪ್ರಭಾವಿ ವ್ಯಕ್ತಿಯೋರ್ವನನ್ನು ವಿವಾಹಿತಳಾಗಿ ಸರಕಾರಿ ಉದ್ಯೋಗ ಒದಗಿಸಿಕೊಡಲು ತಾನು ಸಮರ್ಥಳೆಂದು ಬಿಂಬಿಸಿ ಹಾಗೂ ನಂಬಿಸಿ ತನಗೆ ಸರಕಾರಿ ಇಲಾಖೆಯಲ್ಲಿ ಉದ್ಯೋಗ ಒದಗಿಸುವ ಭರವಸೆ ನೀಡಿ ಒಂದಷ್ಟು ಖರ್ಚು ತಗಲುತ್ತದೆ ಎಂದು ಮೊದಲನೇಯ ಕಂತು ಪಡೆದು, ಬಳಿಕ ವಿವಿಧ ನೆಪಗಳನ್ನು ಮುಂದಿರಿಸಿ ಒಟ್ಟು 13 ಲಕ್ಷಕ್ಕೂ ಮಿಕ್ಕಿದ ಹಣವನ್ನು ಪಡೆದಿರುತ್ತಾಳೆಂದು ತಿಳಿಸಿರುತ್ತಾರೆ.

ರಕ್ಷಿತಾ ರವರ ತಂದೆ ನಿಗಮವೊಂದರ ಉದ್ಯೋಗಿಯಾಗಿದ್ದು , ಇತ್ತೀಚೆಗೆ ನಿವೃತಿಯಾಗಿರುತ್ತಾರೆ. ನಿವೃತ್ತಿಯ ವೇಳೆ ದೊರಕಿದ ಹಣದಲ್ಲಿ ಮಗಳ ಭವಿಷ್ಯ ಉಜ್ವಲವಾಗಲಿ ಎಂದು ಮೊದಲ ಕಂತು ನೀಡಿದ್ದರು. ಬಳಿಕ ನಂಬಿಕೆಯನ್ನು ಮೂಡಿಸುವಂತೆ ಮತ್ತೆ ಮತ್ತೆ ಹಣವನ್ನು ಕೇಳಿದಾಗ, ಮೊದಲು ಕೊಟ್ಟ ಹಣದ ಸುರಕ್ಷತೆಯ ನೆಲೆಯಲ್ಲಿ ಮತ್ತೆ ಮತ್ತೆ ಹಣವನ್ನು ಪಾವತಿಸುತ್ತಾ ಹೋದ ಅವರು ಇದೀಗ ವಂಚನಾ ಜಾಲ ಬಹಿರಂಗಗೊಂಡ ಬಳಿಕ ಆಘಾತಕ್ಕೆ ಒಳಗಾಗಿದ್ದು, ಆರೋಗ್ಯದಲ್ಲಿ ಅಸ್ವಸ್ಥಗೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News