ಕುಟುಂಬದಿಂದಲೇ ಅತ್ಯಾಚಾರ ಸಂತ್ರಸ್ತೆಯ ಹತ್ಯೆ; ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ವಿರುದ್ಧ ದೂರು!

Update: 2024-09-24 02:57 GMT

ಬರೇಲಿ: ಜಾಮೀನಿನ ಮೇಲೆ ಬಿಡುಗಡೆ ಹೊಂದಿದ್ದ ಅತ್ಯಾಚಾರ ಆರೋಪಿ, ಸಂತ್ರಸ್ತೆಯನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾನೆ ಎಂಬ ಸುದ್ದಿ ಕಳೆದ ವಾರ ಸಂಭಾಲ್ ಜನತೆಯನ್ನು ಬೆಚ್ಚಿ ಬೀಳುವಂತೆ ಮಾಡಿತ್ತು. ಹತ್ಯೆಗೀಡಾದ 17 ವರ್ಷ ವಯಸ್ಸಿನ ಸಂತ್ರಸ್ತೆ ಗುಂಡಿನ ದಾಳಿ ನಡೆದಾಗ ಬೈಕ್ ನಲ್ಲಿ ತಾಯಿ ಹಾಗೂ ಸಹೋದರನ ಜತೆ ಇದ್ದಳು. ಆದರೆ ಪ್ರಕರಣದ ಆಳವಾದ ತನಿಖೆ ನಡೆಸಿದಾಗ ಕರಾಳ ಸತ್ಯ ಹೊರಬಿದ್ದಿದೆ. ತಾಯಿ, ಇಬ್ಬರು ಸಹೋದರರು ಮತ್ತು ಮಾವಂದಿರು ಸಂಚು ರೂಪಿಸಿ ಸಂತ್ರಸ್ತೆಯನ್ನು ಹತ್ಯೆ ಮಾಡಿರುವುದು ಬೆಳಕಿಗೆ ಬಂದಿದೆ.

ದಾಳಿಯಲ್ಲಿ ತಾಯಿ ಮತ್ತು ಸಹೋದರ ಯಾವುದೇ ಸಣ್ಣ ಪುಟ್ಟ ಗಾಯಗಳೂ ಇಲ್ಲದೇ ಪಾರಾದ ಬಗ್ಗೆ ಪೊಲೀಸರು ವಿಚಾರಣೆ ನಡೆಸಿದಾಗ ಸತ್ಯ ಹೊರಬಿದ್ದಿದೆ. ಮೇಲ್ನೋಟಕ್ಕೆ ಅತ್ಯಾಚಾರ ಆರೋಪಿ ರಿಂಕು ಕುಮಾರ್ ಈ ಕೃತ್ಯ ಎಸಗಿದ್ದ. ಆದರೆ ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಂತೆ ಘಟನೆ ನಡೆದ ಸಮಯದಲ್ಲಿ ರಿಂಕು ಸಿಂಗ್ ಆಸ್ಪತ್ರೆಯಲ್ಲಿ, ಮರಣ ಶಯ್ಯೆಯಲ್ಲಿದ್ದ ತಂದೆಯ ಜತೆಗಿದ್ದ. ಇದು ತನಿಖೆಯ ದಿಕ್ಕನ್ನು ಬದಲಾಯಿಸಿತು.

ತನಿಖೆ ಮುಂದುವರಿದಂತೆ ಪೊಲೀಸರು ಸಂತ್ರಸ್ತೆಯ ಕುಟುಂಬದವರನ್ನೇ ವಿಚಾರಣೆಗೆ ಗುರಿಪಡಿಸಿದರು. ಆಗ ತಾಯಿಯೇ ಮಗಳ ಹತ್ಯೆಗೆ ಸಂಚು ರೂಪಿಸಿದ ಅಂಶ ಬೆಳಕಿಗೆ ಬಂತು. ಈ ಮೊದಲು ರಿಂಕು ಜತೆ ಮಗಳು ಓಡಿಹೋಗಿದ್ದು, ನ್ಯಾಯಾಲಯದಲ್ಲಿ ಅತ್ಯಾಚಾರಿ ವಿರುದ್ಧ ಸಾಕ್ಷ್ಯ ಹೇಳಲಾರಳಲು ಎಂಬ ಭೀತಿಯಿಂದ ಈ ಕೃತ್ಯ ಎಸಗಿದ್ದಾಗಿ ವಿಚಾರಣೆಯಿಂದ ಗೊತ್ತಾಗಿದೆ.

ತಾಯಿ ತನ್ನ ಮಗಳನ್ನು ಇತ್ತೀಚೆಗೆ ಗಾಜಿಯಾಬಾದ್ ನಿಂದ ಕರೆತಂದಿದ್ದಳು. ಸಂಭಾಲ್ ನ ಮನೆಗೆ ವಾಪಸ್ಸಾದಾಗ ಸಂಬಂಧಿಕರ ಮನೆಗೆ ಹೋಗುವಂತೆ ಮನವೊಲಿಸಿ ಸಹೋದರನ ಜತೆ ಬೈಕ್ ನಲ್ಲಿ ಕರೆದೊಯ್ದಿದ್ದಳು. ಮಾವ ದಾರಿಯಲ್ಲಿ ಬಂದೂಕು ಹಿಡಿದು ನಿಂತಿದ್ದಾನೆ ಎನ್ನುವ ಅರಿವು ಇಲ್ಲದೇ ಹೋಗುತ್ತಿದ್ದ ಯುವತಿಯ ಮೇಲೆ ಮೂರು ಗುಂಡು ಹೊಡೆದು ಮಾವ ಸಾಯಿಸಿದ ಎನ್ನುವುದು ತನಿಖೆಯಿಂದ ದೃಢಪಟ್ಟಿದೆ ಎಂದು ಪೊಲೀಸರು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News