ಕಲಬುರಗಿ: ಹೈದರಾಬಾದ್ ಸಂಸ್ಥಾನದ ಸಾಂಸ್ಕೃತಿಕ ಪರಂಪರೆ ವಿಚಾರ ಸಂಕಿರಣಕ್ಕೆ ಚಾಲನೆ

ಕಲಬುರಗಿ: ಕಡಗಂಚಿ ಸಮೀಪದಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕಡಗಂಚಿ ಮತ್ತು ಕರ್ನಾಟಕ ರಾಜ್ಯ ಪತ್ರಾಗಾರ ಇಲಾಖೆಯ ವಿಭಾಗೀಯ ಕಚೇರಿ ಕಲಬುರ್ಗಿಯ ಸಹಯೋಗದಲ್ಲಿ "ಹೈದರಾಬಾದ್ ಸಂಸ್ಥಾನದ ಸಾಂಸ್ಕೃತಿಕ ಪರಂಪರೆ" ಎಂಬ ವಿಷಯದ ಕುರಿತ ಎರಡು ದಿನಗಳ ವಿಚಾರ ಸಂಕಿರಣಕ್ಕೆ ಗುರುವಾರ ಚಾಲನೆ ನೀಡಲಾಯಿತು.
ಉದ್ಘಾಟಕರಾಗಿ ಮತ್ತು ಪ್ರಧಾನ ಭಾಷಣಕಾರರಾಗಿ ಆಗಮಿಸಿದ್ದ ನಾಡಿನ ಖ್ಯಾತ ಇತಿಹಾಸಕಾರರಾದ ಪ್ರೊ. ಎಸ್. ಚಂದ್ರಶೇಖರ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಮುಖ್ಯ ಅತಿಥಿಗಳಾಗಿ ಅಪ್ಪರಾವ್ ಅಕ್ಕೋಣಿ ಅವರು ವೇದಿಕೆಯ ಉಪಸ್ಥಿತರಿದ್ದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ವಿಭಾಗದ ಮುಖ್ಯಸ್ಥರಾದ ಪ್ರೊ. ಶಿವಗಂಗಾ ರುಮ್ಮಾ ಅವರು ವಹಿಸಿಕೊಂಡಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪ್ರೊ. ವಿಕ್ರಮ ವಿಸಾಜಿ, ಹೈದರಾಬಾದ ಕರ್ನಾಟಕವು ಬೌದ್ಧಿಕತೆಗಿಂತ ಸಾಂಸ್ಕೃತಿಕತೆಗೆ ಹೆಚ್ಚು ಮಹತ್ವ ಕೊಟ್ಟಿತು. ಹಾಗಾಗಿ ಹೈದರಾಬಾದ ಸಂಸ್ಥಾನದ ಸಾಂಸ್ಕೃತಿಕ ಮಹತ್ವವನ್ನು ಅರಿಯುವುದು ಮುಖ್ಯ ಎಂದರು.
ಪ್ರಧಾನ ಭಾಷಣಕಾರರಾಗಿ ಮತ್ತು ಉದ್ಘಾಟಕರಾಗಿ ಆಗಮಿಸಿದ್ದ ಪ್ರೊ. ಎಸ್. ಚಂದ್ರಶೇಖರ ಅವರು ಹೈದರಾಬಾದ ಸಾಂಸ್ಕೃತಿಕ ಪರಂಪರೆಯ ಕುರಿತು ಮಾತನಾಡುತ್ತಾ "ಚರಿತ್ರೆಕಾರನಾದವನು ಚರಿತ್ರೆಯನ್ನು ದಾಖಲಿಸುವ ಸಂದರ್ಭದಲ್ಲಿ ನಿರ್ಣಾಯಕನಂತೆ ವರ್ತಿಸಬಾರದು" ಎಂದು ಹೇಳುವ ಮೂಲಕ ಹೈದರಾಬಾದ ಸಂಸ್ಥಾನದ ಸಾಂಸ್ಕೃತಿಕ ಪರಂಪರೆಯನ್ನು ಭಿನ್ನವಾದ ಒಳನೋಟಗಳಲ್ಲಿ ಚರ್ಚಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಕುಲಸಚಿವ ಪ್ರೊ. ಆರ್.ಆರ್. ಬಿರಾದಾರ, ಪತ್ರಾಗಾರ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರು, ಡಾ. ವೀರಶೆಟ್ಟಿ, ಸೇರಿದಂತೆ ಕನ್ನಡ ವಿಭಾಗದ ಪ್ರಾಧ್ಯಾಪಕರುಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.