ನ್ಯಾಯಮೂರ್ತಿ ಯಶವಂತ್ ವರ್ಮ ನಿವಾಸದಲ್ಲಿ ನಗದು ಪತ್ತೆಯಾಗಿಲ್ಲ ಎಂದು ಹೇಳಿಕೆ ನೀಡಿಲ್ಲ : ಮಾಧ್ಯಮಗಳ ವರದಿ ನಿರಾಕರಿಸಿದ ಅತುಲ್ ಗರ್ಗ್

Photo | hindustantimes
ಹೊಸದಿಲ್ಲಿ: ನ್ಯಾಯಮೂರ್ತಿ ಯಶವಂತ್ ವರ್ಮ ಅವರ ಅಧಿಕೃತ ನಿವಾಸದಲ್ಲಿ ʼಯಾವುದೇ ನಗದು ಪತ್ತೆಯಾಗಿಲ್ಲʼ ಎಂಬ ಹೇಳಿಕೆಯನ್ನು ನೀಡಿಲ್ಲ ಎಂದು ದಿಲ್ಲಿ ಅಗ್ನಿಶಾಮಕ ದಳದ ಮುಖ್ಯಸ್ಥರಾದ ಅತುಲ್ ಗರ್ಗ್ ಸ್ಪಷ್ಟನೆ ನೀಡಿದ್ದಾರೆ.
ಯಶವಂತ್ ವರ್ಮಾ ಅವರ ಅಧಿಕೃತ ನಿವಾಸದಲ್ಲಿ ನಗುದು ಪತ್ತೆಯಾಗಿದೆ ಎಂದು ಅತುಲ್ ಗರ್ಗ್ ಹೇಳಿರುವ ಬಗ್ಗೆ ಶುಕ್ರವಾರ ಕೆಲ ಮಾಧ್ಯಮಗಳು ವರದಿ ಮಾಡಿದೆ. ಇದರ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದ್ದಾರೆ.
ʼಅಗ್ನಿಶಾಮಕ ದಳದವರು ಘಟನಾ ಸ್ಥಳದಲ್ಲಿ ಯಾವುದೇ ನಗದು ಕಂಡುಬಂದಿಲ್ಲ ಎಂದು ಯಾವುದೇ ಮಾಧ್ಯಮಕ್ಕೆ ತಿಳಿಸಿಲ್ಲ. ಮತ್ತೆ ಯಾಕೆ ವರದಿಗಳಲ್ಲಿ ಅವರ ಹೆಸರನ್ನು ಉಲ್ಲೇಖಿಸಲಾಗಿದೆ ಎಂದು ಕೇಳಿದಾಗ, ಯಾಕೆ ಎಂದು ನನಗೆ ತಿಳಿದಿಲ್ಲʼ ಎಂದು ಅತುಲ್ ಗರ್ಗ್ ಹೇಳಿದರು.
ಮಾರ್ಚ್ 14ರಂದು ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ದಿಲ್ಲಿಯ ನಿವಾಸದಲ್ಲಿ ಅಗ್ನಿ ಅನಾಹುತ ಸಂಭವಿಸಿತ್ತು. ಸ್ಥಳಕ್ಕೆ ಅಗ್ನಿ ಶಾಮಕದಳದ ಅಧಿಕಾರಿಗಳು ತೆರಳಿ ಬೆಂಕಿ ನಂದಿಸಿದರು. ಈ ವೇಳೆ ನ್ಯಾಯಮೂರ್ತಿಗಳ ನಿವಾಸದಲ್ಲಿ ಭಾರೀ ಪ್ರಮಾಣದ ನಗದು ಪತ್ತೆಯಾಗಿದೆ ಎಂದು ವರದಿಯಾಗಿತ್ತು.