ಚುನಾವಣಾ ಬಾಂಡ್‌ಗಳ ಸಂಪೂರ್ಣ ಮಾಹಿತಿ ಹಂಚಿಕೊಳ್ಳದ ಎಸ್‌ಬಿಐ: ಮತ್ತೆ ಸುಪ್ರೀಂ ಕೋರ್ಟ್‌ ತರಾಟೆ

Update: 2024-03-15 06:18 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ಚುನಾವಣಾ ಬಾಂಡ್‌ಗಳ ಸಂಪೂರ್ಣ ಡೇಟಾವನ್ನು ಹಂಚಿಕೊಳ್ಳದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾವನ್ನು ಸುಪ್ರೀಂ ಕೋರ್ಟ್ ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ನ್ಯಾಯಾಲಯವು ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಗೊಳಿಸಿದ್ದು, ಕಳೆದ 5 ವರ್ಷಗಳಲ್ಲಿ ಮಾಡಿದ ದೇಣಿಗೆಗಳ ಎಲ್ಲಾ ವಿವರಗಳನ್ನು ಹಂಚಿಕೊಳ್ಳಲು ಬ್ಯಾಂಕ್‌ಗೆ ನಿರ್ದೇಶಿಸಿದೆ.

ಚುನಾವಣಾ ಆಯೋಗದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್, ಎಸ್‌ಬಿಐ ನೀಡಿರುವ ಅಂಕಿಅಂಶಗಳು ಅಪೂರ್ಣ ಎಂದು ಹೇಳಿದೆ. ದಾನಿಗಳು ಮತ್ತು ರಾಜಕೀಯ ಪಕ್ಷಗಳೊಂದಿಗಿನ ಸಂಬಂಧವನ್ನು ಬಹಿರಂಗಪಡಿಸುವಂತೆಯೂ ನ್ಯಾಯಾಲಯ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ನೇತೃತ್ವದ ಐವರು ನ್ಯಾಯಾಧೀಶರ ಪೀಠ, ಎಸ್‌ಬಿಐ ಈಗಾಗಲೇ ಹಂಚಿಕೊಂಡಿರುವ ವಿವರಗಳ ಜೊತೆಗೆ ಚುನಾವಣಾ ಬಾಂಡ್ ಸಂಖ್ಯೆಯನ್ನು ಬಹಿರಂಗಪಡಿಸುವಂತೆ ಸೂಚಿಸಿದೆ.

"ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಪರವಾಗಿ ಯಾರು ಹಾಜರಾಗುತ್ತಿದ್ದಾರೆ? ಅವರು ಬಾಂಡ್ ಸಂಖ್ಯೆಗಳನ್ನು ಬಹಿರಂಗಪಡಿಸಿಲ್ಲ. ಅದನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಹಿರಂಗಪಡಿಸಬೇಕು" ಎಂದು ವಿಚಾರಣೆಯ ಆರಂಭದಲ್ಲಿಯೇ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.

ಎಸ್‌ಬಿಐಗೆ ನೀಡಿದ ನೋಟಿಸ್‌ನಲ್ಲಿ, ಸುಪ್ರೀಂ ಕೋರ್ಟ್ ಪೀಠವು ಮಾರ್ಚ್ 18 ರಂದು ಮುಂದಿನ ವಿಚಾರಣೆಯ ಸಮಯದಲ್ಲಿ ಲೋಪವನ್ನು ವಿವರಿಸಲು ಬ್ಯಾಂಕ್‌ಗೆ ನಿರ್ದೇಶಿಸಿದೆ.

ಚುನಾವಣಾ ಬಾಂಡ್ ಸಂಖ್ಯೆಗಳು ದಾನಿಗಳು ಮತ್ತು ರಾಜಕೀಯ ಪಕ್ಷಗಳ ನಡುವಿನ ಸಂಪರ್ಕವನ್ನು ಸ್ಥಾಪಿಸಲು ಸಹಾಯ ಮಾಡುತ್ತದೆ.

ಚುನಾವಣಾ ಬಾಂಡ್‌ಗಳು ರಾಜಕೀಯ ಪಕ್ಷಗಳಿಗೆ ಹಣವನ್ನು ಘೋಷಿಸದೆ ದೇಣಿಗೆ ನೀಡಲು ವ್ಯಕ್ತಿಗಳಿಗೆ ಮತ್ತು ವ್ಯವಹಾರಗಳಿಗೆ ಅವಕಾಶ ಮಾಡಿಕೊಟ್ಟಿತ್ತು. 2018 ರಲ್ಲಿ ಬಿಜೆಪಿ ಸರ್ಕಾರವು ನಗದು ದೇಣಿಗೆಗೆ ಪರ್ಯಾಯವಾಗಿ ಚುನಾವಣಾ ಬಾಂಡ್‌ ಅನ್ನು ಪರಿಚಯಿಸಿತ್ತು. ಸುಪ್ರೀಂ ಕೋರ್ಟ್ ಕಳೆದ ತಿಂಗಳು ಈ ಯೋಜನೆಯನ್ನು ರದ್ದುಗೊಳಿಸಿದ್ದು, ಇದು ಅಸಂವಿಧಾನಿಕ ಎಂದು ಹೇಳಿತ್ತು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News