ಸತ್ಯ ಹೇಳಿದ ಸತ್ಯಪಾಲ್ ಮೇಲೆ ಸಿಬಿಐ ದಾಳಿ?

Update: 2024-02-27 06:41 GMT

ಸರ್ವಾಧಿಕಾರಿ ಫ್ಯಾಶಿಸ್ಟ್ ಆಡಳಿತದಲ್ಲಿ ಸತ್ಯ ಹೇಳುವವರಿಗೆ ಕಿರುಕುಳ ತಪ್ಪಿದ್ದಲ್ಲ. ಅದಕ್ಕೆ ಇತ್ತೀಚಿನ ಉದಾಹರಣೆ ಸತ್ಯಪಾಲ್ ಮಲಿಕ್‌ರವರ ಮನೆಯ ಮೇಲೆ ಸಿಬಿಐ ದಾಳಿ. ಯಾವಾಗ ಮಲಿಕ್‌ರವರು ಪುಲ್ವಾಮಾ ದಾಳಿಯ ಕೇಂದ್ರ ಸರಕಾರದ ವೈಫಲ್ಯ ಹಾಗೂ ಪ್ರಧಾನಿಗಳ ಚುನಾವಣಾ ತಂತ್ರಗಾರಿಕೆಯನ್ನು ಸಾರ್ವಜನಿಕವಾಗಿ ಬಯಲು ಮಾಡಿದರೋ ಆಗಲೇ ಐಟಿ, ಈ.ಡಿ. ಅಥವಾ ಸಿಬಿಐ ರೇಡ್ ಆಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಹಾಗೆ ಆಗಲೇ ಮಾಡಿದರೆ ಕೇಂದ್ರ ಸರಕಾರದ ಮೇಲೆ ಜನಾಕ್ರೋಶ ಹೆಚ್ಚಾದೀತು ಎಂದು ಸ್ವಲ್ಪ ಕಾಲ ಕಾದು ಅದೂ ಮಲಿಕ್‌ರವರು ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆ ಸೇರಿರುವಾಗ ಫೆ. 22ರಂದು ಮಲಿಕ್‌ರವರ ಮನೆ ಸೇರಿದಂತೆ ಅವರಿಗೆ ಸಂಬಂಧಿಸಿದ 30 ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯ ನಡೆಸಿದೆ ಎನ್ನಲಾಗಿದೆ.

ಇಷ್ಟಕ್ಕೂ ಸತ್ಯಪಾಲ್‌ರ ಮೇಲೆ ಮೋದಿ ಸರಕಾರದ ದ್ವೇಷಕ್ಕೆ ಕಾರಣ ಏನು? ಎಲ್ಲರಿಗೂ ಗೊತ್ತಿರುವ ಸಂಗತಿಯೇ. ಜಮ್ಮು -ಶ್ರೀನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಪುಲ್ವಾಮಾ ಜಿಲ್ಲೆಯ ಲೆಥ್ವಾರಾ ಎಂಬಲ್ಲಿ ಐದು ವರ್ಷಗಳ ಹಿಂದೆ 2019 ಫೆ.14ರಂದು ಭಯೋತ್ಪಾದಕ ದಾಳಿ ನಡೆದು 40 ಜನ ಕೇಂದ್ರ ಮೀಸಲು ಪಡೆಯ ಯೋಧರು ಆತ್ಮಹತ್ಯಾ ಬಾಂಬ್ ದಾಳಿಯಲ್ಲಿ ಮೃತರಾಗಿದ್ದರು. ಅದು ಲೋಕಸಭಾ ಚುನಾವಣೆಯ ಪೂರ್ವತಯಾರಿಯ ಸಮಯ.

ಅತಿ ಸೂಕ್ಷ್ಮ ಪ್ರದೇಶವಾದ ಪುಲ್ವಾಮಾದಿಂದ 2,500 ಸಿಆರ್ ಪಿಎಫ್ ಯೋಧರನ್ನು ಸ್ಥಳಾಂತರಗೊಳಿಸಲು ವಿಮಾನ ಬೇಕೆಂದು ಕೇಳಲಾಗಿತ್ತು. ಆದರೆ ಕೇಂದ್ರ ಗೃಹ ಸಚಿವಾಲಯ ನಿರಾಕರಿಸಿದ್ದರಿಂದ ಬಸ್ ಮೂಲಕ ಯೋಧರನ್ನು ಸಾಗಿಸುವಾಗ ಆತ್ಮಹತ್ಯಾ ಬಾಂಬ್ ದಾಳಿ ನಡೆದು ಮಾರಣಹೋಮ ಘಟಿಸಿತು. ಈ ಘಟನೆಗೆ ಪ್ರತಿಕ್ರಿಯೆಯಾಗಿ 12 ದಿನಗಳ ನಂತರ ಬಾಲಕೋಟ್ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿಸಿ ಭಯೋತ್ಪಾದಕರನ್ನು ಮಟ್ಟ ಹಾಕಲಾಗಿದೆ ಎಂದು ಇಡೀ ದೇಶದ ಜನತೆಯನ್ನು ನಂಬಿಸಿದ ಮೋದಿ ಸರಕಾರ ಜನರಲ್ಲಿ ಪಾಕಿಸ್ತಾನ ವಿರೋಧಿ ಹಾಗೂ ದೇಶಪ್ರೇಮದ ಉನ್ಮಾದವನ್ನು ಹುಟ್ಟಿಸಿ 2019ರ ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯಗಳಿಸಿತ್ತು.

ಆದರೆ ಪುಲ್ವಾಮಾ ದುರಂತ ಸಂಭವಿಸಿದ್ದಾಗ ಜಮ್ಮು ಮತ್ತು ಕಾಶ್ಮೀರದ ರಾಜ್ಯಪಾಲರಾಗಿದ್ದ (2018 ಆಗಸ್ಟ್ 23ರಿಂದ 2019 ಅಕ್ಟೋಬರ್ 30ರ ವರೆಗೆ) ಬಿಜೆಪಿಯ ಹಿರಿಯ ನಾಯಕ ಸತ್ಯಪಾಲ್ ಮಲಿಕ್ ರವರು ಪುಲ್ವಾಮಾ ಘಟನೆಯ ಹಿಂದಿರುವ ಸತ್ಯ ಸಂಗತಿಗಳನ್ನು ನಾಲ್ಕು ವರ್ಷಗಳ ನಂತರ ಸಂದರ್ಶನವೊಂದರಲ್ಲಿ ಬಯಲು ಮಾಡಿ ಆಘಾತಕಾರಿ ಮಾಹಿತಿಗಳನ್ನು ದೇಶದ ಮುಂದಿಟ್ಟರು.

ಸತ್ಯಪಾಲ್ ಮಲಿಕ್ ಬಿಚ್ಚಿಟ್ಟ ಮಾಹಿತಿಗಳು

1. ಯೋಧರಿಗೆ ವಿಮಾನವನ್ನು ಗೃಹ ಸಚಿವಾಲಯವು ನಿರಾಕರಿಸಿದ್ದು ಈ ದುರಂತಕ್ಕೆ ಮೂಲ ಕಾರಣ.

2. ಯೋಧರ ಬಸ್‌ಗಳು ರಸ್ತೆ ಮೂಲಕ ಹೋಗುವಾಗ ಸರಿಯಾದ ರೀತಿಯಲ್ಲಿ ಭದ್ರತೆಯ ಪರಿಶೀಲನೆಯನ್ನೂ ಮಾಡಲಾಗಿರಲಿಲ್ಲ.

3. ಗೃಹ ಸಚಿವಾಲಯದ ವೈಫಲ್ಯಗಳನ್ನು ಸತ್ಯಪಾಲ್‌ರವರು ಪ್ರಧಾನಿ ಮೋದಿಯವರಿಗೆ ತಿಳಿಸಿದಾಗ ಈ ವಿಚಾರದ ಬಗ್ಗೆ ಯಾರ ಬಳಿಯೂ ಮಾತಾಡಬೇಡಿ, ಸುಮ್ಮನಿದ್ದು ಬಿಡಿ ಎಂದು ಒತ್ತಾಯಿಸಿದರು.

4. ಪಾಕಿಸ್ತಾನದ ಮೇಲೆ ದಾಳಿಯ ಆರೋಪ ಹೊರಿಸಿ ಲೋಕಸಭಾ ಚುನಾವಣೆಯಲ್ಲಿ ಲಾಭ ಗಳಿಸುವುದು ಮೋದಿಯವರ ಉದ್ದೇಶವಾಗಿತ್ತು. ವೈಫಲ್ಯಗಳನ್ನು ಮುಚ್ಚಿಟ್ಟು, ಪುಲ್ವಾಮಾ ದಾಳಿಯನ್ನು ಬಳಸಿಕೊಂಡು ಮೋದಿಯವರು ಚುನಾವಣೆ ಗೆದ್ದರು.

5. ಪುಲ್ವಾಮಾ ದಾಳಿ ನಡೆಯುವ ಹತ್ತರಿಂದ ಹದಿನೈದು ದಿನಗಳ ಮುಂಚೆನೇ ದಾಳಿ ನಡೆಸಲು ಬಳಸಿದ ಸ್ಫೋಟಕ ತುಂಬಿದ ಪಾಕಿಸ್ತಾನಿ ಕಾರು ಜಮ್ಮು-ಕಾಶ್ಮೀರದಲ್ಲಿ ಓಡಾಡುತ್ತಿತ್ತು ಎಂಬ ಬೇಹುಗಾರಿಕೆ ವರದಿ ಇತ್ತು. ನಿರಂತರ ಉಗ್ರರ ಬೆದರಿಕೆ ಇರುವ ಆತಂಕಕಾರಿ ಸ್ಥಳದಲ್ಲಿ ಯಾರೂ ಈ ಸಂದೇಹಾಸ್ಪದ ಕಾರಿನ ಕುರಿತು ವಿಚಾರಣೆ ಮಾಡದೆ ಇರುವುದರಿಂದ ಗಂಭೀರ ಗುಪ್ತಚರ ವೈಫಲ್ಯವಾಗಿದ್ದೂ ಈ ದುರಂತಕ್ಕೆ ಕಾರಣ ಎಂದು ಆನಂತರ ವರದಿಗಳು ಹೇಳಿದವು.

6. ಕೇಂದ್ರ ಗೃಹ ಇಲಾಖೆಗೆ ದಾಳಿಯ ಸಂಭವನೀಯತೆ ಬಗ್ಗೆ 11 ಬಾರಿ ಗುಪ್ತಚರ ಮಾಹಿತಿ ಲಭಿಸಿದ್ದರೂ ಕ್ರಮ ತೆಗೆದುಕೊಳ್ಳಲು ನಿರ್ಲಕ್ಷ್ಯವಹಿಸಲಾಗಿತ್ತು. ಸುರಕ್ಷತಾ ವ್ಯವಸ್ಥೆಯ ಲೋಪದಿಂದಾಗಿ ಈ ಭಯಾನಕ ದಾಳಿ ಘಟಿಸಿತ್ತು.

ಹೀಗೆ ಪುಲ್ವಾಮಾ ಹತ್ಯಾಕಾಂಡಕ್ಕೆ ಕೇಂದ್ರ ಸರಕಾರದ ವೈಫಲ್ಯ ಹಾಗೂ ಚುನಾವಣಾ ತಂತ್ರಗಾರಿಕೆ ಕಾರಣ ಎಂದು ಸತ್ಯಪಾಲ್‌ರವರು ಹೇಳಿದಾಗ ಭಾರೀ ಮುಜುಗರಕ್ಕೊಳಗಾದವರು ಸುಮ್ಮನಿರಲು ಸಾಧ್ಯವೇ? ಅದೇ ಕಾರಣಕ್ಕೆ ಜಮ್ಮು ಕಾಶ್ಮೀರ, ಪಂಜಾಬ್, ಹರ್ಯಾಣ, ಯುಪಿ, ಬಿಹಾರ, ದಿಲ್ಲಿ ಮತ್ತು ಮುಂಬೈನಲ್ಲಿ ಸಿಬಿಐ ಅಧಿಕಾರಿಗಳು ಏಕಕಾಲಕ್ಕೆ ಶೋಧ ಕಾರ್ಯಾಚರಣೆಗೆ ಮುಂದಾದರು ಎನ್ನಲಾಗಿದೆ. ದಾಳಿಗೆ ಏನಾದರೂ ಒಂದು ಕಾರಣ ಬೇಕಲ್ಲವೇ? 2,200 ಕೋಟಿ ರೂ. ಮೌಲ್ಯದ ಕಿರು ಜಲವಿದ್ಯುತ್ ಯೋಜನೆಯ ಕೆಲಸವನ್ನು ಗುತ್ತಿಗೆ ನೀಡುವಲ್ಲಿ ನಡೆದ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಈ ಶೋಧ ಕಾರ್ಯಾಚರಣೆ ಎಂದು ಸಿಬಿಐ ಅಧಿಕಾರಿಗಳು ಸಮರ್ಥಿಸಿಕೊಳ್ಳುತ್ತಿದ್ದಾರೆ.

ಆದರೆ ಕೇಂದ್ರ ಸರಕಾರದ ತನಿಖಾ ಸಂಸ್ಥೆಗಳು ಯಾವ ಉದ್ದೇಶಕ್ಕೆ ಯಾರ ಮೇಲೆ ದಾಳಿ ಮಾಡುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ವಿರೋಧ ಪಕ್ಷದ ನಾಯಕರನ್ನು ಹೆದರಿಸಿ ಪಕ್ಷಗಳನ್ನು ಒಡೆದು, ರಾಜ್ಯ ಸರಕಾರಗಳನ್ನು ಬೀಳಿಸಿ ಬಿಜೆಪಿ ಆಡಳಿತ ಸ್ಥಾಪಿಸಲು ಈ ತನಿಖಾ ಸಂಸ್ಥೆಗಳನ್ನು ವ್ಯಾಪಕವಾಗಿ ಬಳಸಲಾಗಿದೆ. ವಿರೋಧಿಸುವವರ ಧ್ವನಿ ಅಡಗಿಸಲು ಐಟಿ, ಈ.ಡಿ. ಸಂಸ್ಥೆಗಳು ಕಾರ್ಯನಿರತವಾಗಿವೆ. ಅಂತಹದರಲ್ಲಿ ನೇರವಾಗಿ ಮೋದಿಯವರ ಮೇಲೆ, ಕೇಂದ್ರ ಸರಕಾರದ ವೈಫಲ್ಯದ ಮೇಲೆ ಆರೋಪ ಮಾಡಿದ ಸತ್ಯಪಾಲ್ ಮಲಿಕ್‌ರನ್ನು ಸುಮ್ಮನೆ ಬಿಡಲು ಸಾಧ್ಯವೇ?

ಮೋದಿಯವರ ವಿರುದ್ಧ ನಿರ್ಧಾರ ತೆಗೆದುಕೊಂಡವರು ನೆಮ್ಮದಿಯಾಗಿರಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ. ಇದಕ್ಕೆ ಇನ್ನೊಂದು ಉದಾಹರಣೆ ಹೀಗಿದೆ. ಮೋದಿ ಮತ್ತು ಶಾರವರ ಮೇಲೆ 2019ರಲ್ಲಿ ಚುನಾವಣಾ ಸಂಹಿತೆ ಉಲ್ಲಂಘನೆ ಕುರಿತು ಏಳು ದೂರುಗಳು ದಾಖಲಾಗಿದ್ದವು. ಇವುಗಳ ಕುರಿತು ವಿಚಾರಣೆ ಮಾಡಿದ ಚುನಾವಣಾ ಕಮಿಷನ್ ಕ್ಲೀನ್‌ಚಿಟ್ ನೀಡಿ ತಮ್ಮ ಮೋದಿ ನಿಷ್ಠೆಯನ್ನು ಸಾಬೀತುಪಡಿಸಿತು. ಮೂರು ಜನ ಚುನಾವಣಾ ಆಯುಕ್ತರಲ್ಲಿ ಒಬ್ಬರಾದ ಅಶೋಕ್ ಲವಾಸಾರವರು ಮಾತ್ರ ಏಳು ದೂರುಗಳಲ್ಲಿ ಐದಕ್ಕೆ ಕ್ಲೀನ್‌ಚಿಟ್ ಕೊಡಲು ನಿರಾಕರಿಸಿದರು. ಮುಂದೆ ಈ ಚುನಾವಣಾಧಿಕಾರಿಯ ಪತ್ನಿ, ಮಗ, ಮಗಳು ಹಾಗೂ ಸಹೋದರಿಯರ ಮೇಲೆ ಸರಕಾರಿ ತನಿಖಾ ಸಂಸ್ಥೆಗಳಿಂದ ನೋಟಿಸ್ ಜಾರಿಮಾಡಲಾಯಿತು ಹಾಗೂ ಸಾವಕಾಶವಾಗಿ ಅಶೋಕ್ ಲವಾಸಾರವರನ್ನು ಅಧಿಕಾರದಿಂದ ಹೊರಗೆ ಹಾಕಲಾಯಿತು.

ಇದು ಸರ್ವಾಧಿಕಾರಿ ಸರಕಾರದ ಸಾಮ,ಭೇದ,ದಂಡ ಪ್ರಯೋಗದ ರಣನೀತಿ. ಈ ಕುತಂತ್ರ ನೀತಿಯಿಂದಾಗಿ ಚುನಾಯಿತ ಸರಕಾರಗಳೇ ಪಲ್ಲಟಗೊಂಡಿವೆ. ಧೈರ್ಯವಾಗಿ ಪ್ರಶ್ನಿಸುವವರು ತನಿಖಾ ಸಂಸ್ಥೆಗಳ ದಾಳಿಗೆ ಒಳಗಾಗಿದ್ದಾರೆ. ಹಲವಾರು ಪ್ರತಿಪಕ್ಷದ ನಾಯಕರು ಯಾವತ್ತು ತಮ್ಮ ಮೇಲೆ ದಾಳಿ ಮಾಡಲಾಗುತ್ತದೋ ಎನ್ನುವ ಆತಂಕದಲ್ಲಿದ್ದಾರೆ. ತನಿಖಾ ಸಂಸ್ಥೆಗಳಿಗೆ ಹೆದರಿ 33ಕ್ಕೂ ಹೆಚ್ಚು ಕಾರ್ಪೊರೇಟ್ ಕಂಪೆನಿಗಳು ಕೋಟ್ಯಂತರ ರೂ.ಗಳ ಕಪ್ಪಕಾಣಿಕೆಯನ್ನು ಬಿಜೆಪಿ ಚುನಾವಣಾ ಬಾಂಡ್‌ಗೆ ಕಟ್ಟಿವೆ. ಫ್ಯಾಶಿಸ್ಟ್ ಪ್ರಭುತ್ವದ ದಮನಗಳಿಂದಾಗಿ ಪ್ರಜಾಪ್ರಭುತ್ವವೇ ಅಪಾಯದಲ್ಲಿದೆ. ಸಾಂವಿಧಾನಿಕ ಸಂಸ್ಥೆಗಳ ದುರುಪಯೋಗ ಮಾಡಿಕೊಳ್ಳಲಾಗುತ್ತದೆ. ಇದು ನಿಜಕ್ಕೂ ಪ್ರಜಾತಂತ್ರ ವ್ಯವಸ್ಥೆಗೆ ಅಪಾಯಕಾರಿ. ಸಂವಿಧಾನಕ್ಕೆ ಆತಂಕಕಾರಿ. ಇಡೀ ದೇಶ ಪ್ರಜಾತಂತ್ರ ವ್ಯವಸ್ಥೆಯಿಂದ ಸರ್ವಾಧಿಕಾರಿ ವ್ಯವಸ್ಥೆಯತ್ತ ದಾಪುಗಾಲಿಡುತ್ತದೆ. ಜನರ ಗಮನವನ್ನು ರಾಮಮಂದಿರದತ್ತ ತಿರುಗಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಶಶಿಕಾಂತ ಯಡಹಳ್ಳಿ

contributor

Similar News