ಹೊಸತನದ ಕಥನ ಮಾರ್ಗದ ಅನಿವಾರ್ಯತೆ ಇಂದು ನಮ್ಮೆದುರಿಗಿದೆ

ವಿಶ್ವರಂಗಭೂಮಿ ದಿನದ ಸಂದೇಶ - 2025;

Update: 2025-03-27 10:15 IST
ಹೊಸತನದ ಕಥನ ಮಾರ್ಗದ ಅನಿವಾರ್ಯತೆ ಇಂದು ನಮ್ಮೆದುರಿಗಿದೆ
  • whatsapp icon

ಗ್ರೀಕ್ ಮೂಲ:

ಥಿಯೋಡರಸ್ ಟರೆರ್ಪಾಲೋಸ್

ಕನ್ನಡಕ್ಕೆ: ಪ್ರಶಾಂತ್ ಅನಂತಾಡಿ

ಆರ್ಥಿಕ ಸಂಕಷ್ಟದೊಳಗೆ ಮುಳುಗಿ ಹೋಗಿರುವ, ಅವಾಸ್ತವಿಕತೆಯ ಬದುಕಿನ ಸ್ಥಿತಿಗಳ ಒಳಗೆ ಬಂದಿಯಾಗಿರುವ, ಖಾಸಗಿತನದ ಪರಿಧಿಯೊಳಗೆ ಉಸಿರುಗಟ್ಟಿದಂತಿರುವ, ಯಾಂತ್ರಿಕತೆಯ ಬಲೆಯೆಂಬ ನಿಯಂತ್ರಕದಂತಿರುವ ವ್ಯವಸ್ಥೆಯೊಳಗೆ ಸಿಲುಕಿ ಒದ್ದಾಡುತ್ತಿರುವ, ಬದುಕಿನುದ್ದಕ್ಕೂ ದಮನಕಾರಿ ಕ್ರೌರ್ಯಗಳಲ್ಲಿ ಬಂಧಿಯಾಗಿರುವ ಬಡ ಜನಸಮುದಾಯದ ಆರ್ತನಾದ - ನಮ್ಮತನವನ್ನು ರಕ್ಷಿಸಿ ಎಂಬ ಕಾಲದ ಕರೆಯನ್ನು ನಮ್ಮೀ ರಂಗಭೂಮಿಯು ಕೇಳಿಸಿಕೊಳ್ಳ ಬಹುದೇ?

ವ್ಯಕ್ತಿ ಬದುಕಿನ ಆವರಣದಂತಿರುವ ಪರಿಸರ, ಅದರ ಬಗೆಯದಾಗಿನ ಎಗ್ಗಿಲ್ಲದ ವಿನಾಶ, ಜಾಗತಿಕ ತಾಪಮಾನ, ಜೀವ ವೈವಿಧ್ಯದ ಬಲುದೊಡ್ಡ ಪ್ರಮಾಣದ ವಿನಾಶ, ಸಾಗರಗಳ ಮಲಿನತೆ, ಹಿಮಖಂಡಗಳ ಕರಗುವಿಕೆ, ಭೀತಿ ಹುಟ್ಟಿಸುವ ಕಾಡ್ಗಿಚ್ಚುಗಳು ಸೇರಿದಂತೆ ನಡೆಯುತ್ತಿರುವ ಈ ಹವಾಮಾನ ವೈಪರೀತ್ಯಗಳ ಬಗ್ಗೆ ರಂಗಭೂಮಿಯು ಸಂವೇದನೆಯನ್ನು ವ್ಯಕ್ತಪಡಿಸುತ್ತಿದೆಯೇ? ಒಟ್ಟಂದದ ಜೈವಿಕ ಸಂರಚನೆಯ ಬಗ್ಗೆ ರಂಗಭೂಮಿಗೆ ಅರಿವಾದರೂ ಇದೆಯೇ? ಶತಮಾನಗಳಿಂದ ರಂಗಭೂಮಿಯು ಈ ಜಗತ್ತಿನ ಮೇಲಿನ ಮಾನವನ ಅವ್ಯಾಹತವಾದ ಹಸ್ತಕ್ಷೇಪಗಳನ್ನು ಗಮನಿಸುತ್ತಾ ಬಂದಿದೆ. ಆದರೆ ಇದಕ್ಕೆ ಪರಿಹಾರಾತ್ಮಕವಾಗಿ ಸ್ಪಂದಿಸುವ ಗಟ್ಟಿತನವನ್ನು ಅದು ಇನ್ನೂ ಪಡೆದುಕೊಂಡಿಲ್ಲವೆನ್ನುವುದು ಸತ್ಯ.

ರಾಜಕೀಯ, ಆರ್ಥಿಕ ಪರಿಣಾಮಗಳು, ಮಾಧ್ಯಮಗಳು ಮತ್ತು ಪೂರ್ವ ನಿರ್ಧರಿತವಾಗಿರುವಂತೆ ಅಭಿಪ್ರಾಯ ರೂಪಿಸಬಲ್ಲ ವ್ಯವಸ್ಥೆಗಳಿಗೆ ಸಿಲುಕಿ ಹೈರಾಣಾಗುತ್ತಿರುವ 21ನೇ ಶತಮಾನದ ಜನರ ಬದುಕಿನ ಬಗ್ಗೆ ಈ ರಂಗಭೂಮಿಯು ನಿಜವಾಗಿಯೂ ಚಿಂತಿಸುತ್ತಿದೆಯೇ? ಇನ್ನೊಬ್ಬರಿಂದ ಸುರಕ್ಷಿತ ಅಂತರವನ್ನು ಕಾಪಿಟ್ಟುಕೊಳ್ಳುತ್ತಿವೆ ಎನ್ನುವ ಕಾರಣದಿಂದಲೇ ವರ್ತಮಾನದ ಬದುಕನ್ನು ಬಹುತೀವ್ರವಾಗಿ ಪ್ರಭಾವಿಸುತ್ತಿರುವ ಸಾಮಾಜಿಕ ಮಾಧ್ಯಮಗಳು ಒಂದು ಪ್ರಬಲ ಸಂವಹನ ಸಾಧ್ಯತೆಗಳಾಗಿ ರೂಪುಗೊಂಡಿರುವುದೇ ಎನ್ನುವುದೊಂದು ಒಗಟು. ಇತರರ ಬಗೆಗಿನ ಭಯ, ಭಿನ್ನತೆಗಳು, ಅಪರಿಚಿತತೆಯ ಕುರಿತಾದ ಅಗಾಧವಾದ ಪ್ರಜ್ಞೆಯು ಇಂದು ನಮ್ಮೆಲ್ಲ ಆಲೋಚನೆಗಳನ್ನು ಪ್ರಭಾವಿಸುತ್ತಿರುವಂತೆ ಕಾಣುತ್ತಿದೆ.

ವಾಸ್ತವದ ನಿರಂತರವಾದ ಋಣಾತ್ಮಕ ಆಘಾತಗಳಿಂದ ರಕ್ತ ಬಸಿದು ಹೋಗುತ್ತಿದ್ದರೂ ಅದನ್ನು ಲೆಕ್ಕಿಸದೆ ಬಹುತ್ವದ ಸಹಬಾಳ್ವೆಯ ಕಲ್ಪನೆಯನ್ನು ಸದಾ ಸಾಕ್ಷಾತ್ಕಾರಗೊಳಿಸಲು ರಂಗಭೂಮಿಯು ಕಾರ್ಯತತ್ಪರವಾಗಿದೆಯೇ?

ಈ ರೀತಿಯಾದ ವಿಷಣ್ಣ ಘಟನೆಗಳು ನಮ್ಮನ್ನು ಪುರಾಣಗಳನ್ನು ಮುರಿದು ಮತ್ತೆ ಕಟ್ಟುವ ಅಥವಾ ಪುನರ್ ಸೃಷ್ಟಿಯ ಕಡೆಗೆ ಆಹ್ವಾನಿಸುತ್ತಿರುವಂತಿವೆ. ಹೈನರ್ ಮುಲ್ಲರ್ ಹೇಳುವಂತೆ ‘‘ಪುರಾಣವೆಂಬುದು ತಾಂತ್ರಿಕತೆಗಳ ಸಂಕಲನವಿದ್ದಂತೆ. ಈ ಸಂಕಲನಕ್ಕೆ ಸದಾ ಹೊಸತನ ಮತ್ತು ವೈವಿಧ್ಯತೆಯ ಅಂಶಗಳು ಪೂರಣ ಮಾಡಬಹುದಾದದ್ದು’’. ಸಾಂಸ್ಕೃತಿಕ ಕ್ಷೇತ್ರ ಹಾಗೂ ನಾನು ಇನ್ನೂ ಹೇಳುವುದಾದರೆ ಅನಾಗರಿಕತೆಯ ವಲಯದ ವೇಗವರ್ಧಕವು ಇನ್ನೂ ಹಿಗ್ಗುವಂತೆ ಮಾಡುವ ಶಕ್ತಿಯನ್ನು ವರ್ಗಾಯಿಸಬಲ್ಲ ಛಾತಿಯನ್ನು ಇದು ಹೊಂದಿದೆ.

ಈಗ ಎದುರಾಗುವ ಮತ್ತೊಂದು ಪ್ರಶ್ನೆಯೆಂದರೆ, ಸಾಮಾಜಿಕ ಕ್ಷೇತ್ರದ ಮೇಲಾಗುತ್ತಿರುವ ಪ್ರಹಾರದ ಮೇಲೆ ರಂಗಭೂಮಿಯು ಬೆಳಕು ಚೆಲ್ಲಬಹುದೇ ಮತ್ತು ಈ ತೆರನಾದ ಅಪಸವ್ಯಕ್ಕೆ ಕಾರಣೀಭೂತವಾಗುವ ಕಾರಣಗಳಿಂದ ತಟಸ್ಥವಾಗಬಹುದೇ? ಎಂದು.

ಇಂತಹ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ನೀಡಿ ಹಗುರಾಗಿಸಲು ಸಾಧ್ಯವಾಗದು ಮತ್ತು ರಂಗಭೂಮಿಯು ಇಂತಹ ಉತ್ತರಿಸಲಾಗದ ಪ್ರಶ್ನೆಗಳ ಮೂಲಕ ಜೀವಂತವಾಗಿರುತ್ತದೆ ಹಾಗೂ ಕಾಲಾತೀತವಾಗಿರಲು ಸಾಧ್ಯವಾಗುತ್ತದೆ ಎನ್ನುವುದೇ ಒಂದು ಚೋದ್ಯ.

ಡಯೋನಿಸಸ್‌ನಿಂದ ಪ್ರೇರಿತವಾದ ಈ ಪ್ರಶ್ನೆಗಳು ಆತನ ಜನ್ಮಸ್ಥಳದಿಂದ ಪ್ರಾರಂಭಗೊಂಡು ಪ್ರಾಚೀನ ರಂಗಭೂಮಿಯ ಸಂಗೀತದ ಮೂಲಕ ಸಾಗಿ, ಮನುಕುಲದ ಕೇಡಿಗೆ ಕಾರಣವಾಗುವ ಯುದ್ಧಗಳಲ್ಲಿ ಓರ್ವ ಅಂತರ್ಮುಖಿ ನಿರಾಶ್ರಿತನ ಮುಖಾಂತರ ಮುಂದುವರಿಯುತ್ತಾ ಬಂದು ಇಂದು ವಿಶ್ವ ರಂಗಭೂಮಿ ದಿನದ ಅವತರಣಿಕೆಗೆ ಬಂದು ನಿಂತಿದೆ.

ನಾವು ಭೂತ, ವರ್ತಮಾನ, ಭವಿಷ್ಯಗಳನ್ನು ಸಂಲಗ್ನಗೊಳಿಸಬಲ್ಲ ಪುರಾಣ ಮತ್ತು ರಂಗಭೂಮಿಗಳ ಬಲು ಅಮಿತಾನಂದದ ದೇವನಂತಿರುವ ಡಯೋನಿಸಸ್‌ನ ಕಣ್ಣುಗಳೊಳಗೆ ನೋಡೋಣ. ಸ್ಯೂಸ್ ಮತ್ತು ಸೆಮೆಲ್‌ನ ಮಗನಾಗಿರುವ ಈತ, ಗಂಡು-ಹೆಣ್ಣು, ಕೋಪ- ಕರುಣೆ, ದೈವಿಕ ಮತ್ತು ಮೃಗತ್ವ, ಶಿಸ್ತು -ಗೊಂದಲ, ತರ್ಕ-ಅತರ್ಕ, ಸಾವು ಮತ್ತು ಬದುಕುಗಳೆಂಬ ಪರಿಧಿಗಳಲ್ಲಿ ಅನಿಶ್ಚಿತತೆಯಿಂದ ಲಾಗಹಾಕುವ ಲಾಗಪಟುವಿನಂತೆ ಕಾಣಿಸಿಕೊಳ್ಳಬಲ್ಲ ನಾಜೂಕುಗಾರ.

ಈ ಡಯೋನಿಸಸ್ ಮಾನವನ ಬಹು ಆಯಾಮಗಳ ಅತ್ಯಂತ ನಿಗೂಢತೆಯ ಮತ್ತು ಪುರಾಣಗಳ ಬಗೆಯದ ಆಳವಾದ ಶೋಧನೆಯನ್ನು ಬೇಡುವ ಒಂದು ಮೂಲಭೂತವಾದ ಪ್ರಶ್ನೆಯಾದ ‘ಇವೆಲ್ಲ ಏನು?’ ಎನ್ನುವ ಚಕಿತವಾದ, ಆಧ್ಯಾತ್ಮಿಕ ರೂಪಿನಪ್ರಶ್ನೆಯನ್ನು ಕೇಳುತ್ತಾನೆ.

ಬಹು ಆಯಾಮದ ವರ್ತಮಾನದಿಂದ ಸೃಷ್ಟಿಯಾಗಬಲ್ಲ ನೆನಪುಗಳು ಮತ್ತು ರಾಜಕೀಯಾತ್ಮಕವಾದ ಜವಾಬ್ದಾರಿ ಹಾಗೂ ಹೊಸ ಮೌಲ್ಯಗಳನ್ನು ಬೆಳೆಸಬಲ್ಲ ಒಂದು ಹೊಸತನದ ಕಥನ ಮಾರ್ಗದ ತೀರಾ ಅನಿವಾರ್ಯತೆ ಇಂದು ನಮ್ಮೆದುರು ನಿಂತಿದೆ. ಅರ್ಥಾತ್ ಇದು ಈ ವಿಶ್ವದ ಅನಿವಾರ್ಯತೆಯೂ ಆಗಿದೆ.

1962ರಿಂದ ಪ್ರತಿ ವರ್ಷ ಮಾರ್ಚ್ 27ರಂದು ವಿಶ್ವ ರಂಗಭೂಮಿ ದಿನವನ್ನು ಅಂತರ್‌ರಾಷ್ಟ್ರೀಯ ರಂಗಭೂಮಿ ಸಂಸ್ಥೆ-ಐಟಿಐ (International Theatre Institute) ಕೇಂದ್ರಗಳು, ಐಟಿಐ ಸಹಕಾರ ಸದಸ್ಯರು, ರಂಗಭೂಮಿ ವೃತ್ತಿಪರರು, ನಾಟಕ ಸಂಸ್ಥೆಗಳು, ನಾಟಕ ವಿಶ್ವವಿದ್ಯಾನಿಲಯಗಳು ಮತ್ತು ರಂಗ ಪ್ರೇಮಿಗಳು ವಿಶ್ವದಾದ್ಯಂತ ಆಚರಿಸುತ್ತಾರೆ.

ರಂಗಭೂಮಿ ಎಂಬ ಕಲಾ ಪ್ರಕಾರದ ಮೌಲ್ಯ ಮತ್ತು ಪ್ರಾಮುಖ್ಯತೆಯನ್ನು ನೋಡುವವರಿಗೆ ಈ ದಿನವು ಒಂದು ಆಚರಣೆಯಾಗಿದೆ ಮತ್ತು ಜನರಿಗೆ ಅದರ ಮೌಲ್ಯವನ್ನು ಇನ್ನೂ ಗುರುತಿಸದ ಸರಕಾರಗಳು, ರಾಜಕಾರಣಿಗಳು ಮತ್ತು ಸಂಸ್ಥೆಗಳಿಗೆ ಎಚ್ಚರಿಕೆಯ ಗಂಟೆಯಾಗಿ ಕಾರ್ಯನಿರ್ವಹಿಸುತ್ತದೆ. ವೈಯಕ್ತಿಕ ಮತ್ತು ಆರ್ಥಿಕ ಬೆಳವಣಿಗೆಗೆ ಅದರ ಸಾಮರ್ಥ್ಯವನ್ನು ಇನ್ನೂ ಅರಿತುಕೊಂಡಿಲ್ಲ.

ವಿಶ್ವ ರಂಗಭೂಮಿ ದಿನವನ್ನು ಆಚರಿಸುವ ಮುಖ್ಯ ಉದ್ದೇಶ ರಂಗಭೂಮಿಯ ಮಹತ್ವವನ್ನು ಸಾರ್ವಜನಿಕರಿಗೆ ತಿಳಿಸುವುದು ಮತ್ತು ರಂಗಭೂಮಿ ಕಲಾವಿದರನ್ನು ಪ್ರೋತ್ಸಾಹಿಸುವುದು.

ವಿಶ್ವ ರಂಗಭೂಮಿ ದಿನದಂದು, ವಿಶ್ವದಾದ್ಯಂತದ ರಂಗಭೂಮಿ ಕಲಾವಿದರು ಮತ್ತು ರಂಗಭೂಮಿ ಪ್ರೇಮಿಗಳು ಒಂದಾಗಿ ರಂಗಭೂಮಿಯ ಮಹತ್ವವನ್ನು ಆಚರಿಸುತ್ತಾರೆ. ಈ ದಿನದಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ, ಅವುಗಳಲ್ಲಿ ನಾಟಕಗಳು, ರಂಗಭೂಮಿ ಕಾರ್ಯಾಗಾರಗಳು ಮತ್ತು ರಂಗಭೂಮಿಯ ಬಗ್ಗೆ ಉಪನ್ಯಾಸಗಳು ಸೇರಿವೆ.

ಪ್ರತಿ ವರ್ಷ, ಅಂತರ್‌ರಾಷ್ಟ್ರೀಯ ರಂಗಭೂಮಿ ಸಂಸ್ಥೆ ವಿಶ್ವ ರಂಗಭೂಮಿ ದಿನದ ಸಂದೇಶವನ್ನು ಬಿಡುಗಡೆ ಮಾಡುತ್ತದೆ. ಈ ಸಂದೇಶವನ್ನು ವಿಶ್ವದಾದ್ಯಂತದ ರಂಗಭೂಮಿ ಕಲಾವಿದರು ಮತ್ತು ರಂಗಭೂಮಿ ಪ್ರೇಮಿಗಳು ಓದುತ್ತಾರೆ ಮತ್ತು ರಂಗಭೂಮಿಯ ಮಹತ್ವವನ್ನು ನೆನಪಿಸಿಕೊಳ್ಳುತ್ತಾರೆ.

ವಿಶ್ವ ರಂಗಭೂಮಿ ದಿನದಂದು ರಂಗಭೂಮಿಯ ಮಹತ್ವವನ್ನು ಆಚರಿಸಬೇಕಾಗಿದೆ

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಪ್ರಶಾಂತ್ ಅನಂತಾಡಿ

contributor

Similar News