‘ಸ್ಮಾರ್ಟ್ ಸಿಟಿ’ ವೈಫಲ್ಯಕ್ಕೆ ಯಾರು ಹೊಣೆ?

Update: 2025-04-03 11:45 IST
Editor : Naufal | Byline : ಎನ್. ಕೇಶವ್
‘ಸ್ಮಾರ್ಟ್ ಸಿಟಿ’ ವೈಫಲ್ಯಕ್ಕೆ ಯಾರು ಹೊಣೆ?
  • whatsapp icon

ಸ್ಮಾರ್ಟ್ ಸಿಟಿ ಮಿಷನ್‌ನ ಗಡುವು ಮೊನ್ನೆ ಮಾರ್ಚ್ 31 ಕ್ಕೆ ಕೊನೆಗೊಂಡಿದೆ.ಆದರೆ ಸ್ಮಾರ್ಟ್ ಆಗಬೇಕಿದ್ದ ನಗರಗಳು ನಿಜಕ್ಕೂ ಸ್ಮಾರ್ಟ್ ಆಗಿವೆಯೇ?

ದಿಲ್ಲಿಯಲ್ಲಿ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಫ್ಲೈಓವರ್‌ಗಳು ಮತ್ತು ಅಂಡರ್‌ಪಾಸ್‌ಗಳನ್ನು ನಿರ್ಮಿಸಲಾಗುತ್ತಿದೆ. ಇಷ್ಟೆಲ್ಲದರ ನಂತರವೂ ದಿಲ್ಲಿ ಸ್ಮಾರ್ಟ್ ಆಗಲು ಸಾಧ್ಯವಾಗಲಿಲ್ಲ. ದಿಲ್ಲಿ ಜನರ ಟ್ರಾಫಿಕ್ ಜಾಮ್ ಅನುಭವದಲ್ಲಿ ಏನೇನೂ ಬದಲಾವಣೆ ಆಗಿಲ್ಲ.

ದಿಲ್ಲಿಯಲ್ಲಿ ಸ್ವಚ್ಛತೆ ಸುಧಾರಿಸಲು ಸಾಧ್ಯವಾಗಲೇ ಇಲ್ಲ. ಪ್ರಗತಿ ಮೈದಾನದ ಬಳಿ ನಿರ್ಮಿಸಲಾದ ಸುರಂಗ ದುರಸ್ತಿಯಾಗುತ್ತಲೇ ಇದೆ. ಅದರ ಒಂದು ಭಾಗ ಇನ್ನೂ ಕಾರ್ಯನಿರ್ವಹಣೆಗೆ ತಯಾರಾಗಿಯೇ ಇಲ್ಲ.

ಇನ್ನು ಬೆಂಗಳೂರಿನ ಕತೆಯೂ ಅಷ್ಟೇ.

ಬೆಂಗಳೂರು ಎಷ್ಟು ಸ್ಮಾರ್ಟ್ ಸಿಟಿಯಾಗಿದೆ? ಅಲ್ಲಿ ಸ್ವಚ್ಛತೆ ಇದೆಯೇ? ಅಲ್ಲಿ ಜನರನ್ನು ಹೈರಾಣಾಗಿಸುವ ಟ್ರಾಫಿಕ್ ಜಾಮ್ ಕಡಿಮೆಯಾಗಿದೆಯೇ? ಹಾಗಾದರೆ ಸಾವಿರಾರು ಕೋಟಿ ರೂ. ಖರ್ಚು ಮಾಡಿ ಇಷ್ಟೆಲ್ಲಾ ಮಾಡಿದ ನಗರದಲ್ಲಿ ಟ್ರಾಫಿಕ್ ಜಾಮ್ ಸ್ಥಿತಿ ಏಕೆ ಕೆಟ್ಟದಾಗಿದೆ?

ಕರ್ನಾಟಕದಲ್ಲಿ ಬೆಂಗಳೂರು ಅಲ್ಲದೆ ಮಂಗಳೂರು, ಹುಬ್ಬಳ್ಳಿ ಧಾರವಾಡ, ಬೆಳಗಾವಿ, ದಾವಣಗೆರೆ, ತುಮಕೂರು, ಶಿವಮೊಗ್ಗ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿವೆ. ಇವುಗಳಲ್ಲಿ ಯಾವ ನಗರ ಸ್ಮಾರ್ಟ್ ಆಗಿದೆ?

ಸ್ಮಾರ್ಟ್ ಸಿಟಿ ಕೇವಲ ಕೇಂದ್ರ ಸರಕಾರದ ಯೋಜನೆಯಲ್ಲ. ಇದರಲ್ಲಿ ರಾಜ್ಯ ಸರಕಾರಕ್ಕೂ ಪಾಲು ಇದೆ. ಕೇಂದ್ರ ಸರಕಾರವೇ ಹೇಳಿರುವ ಹಾಗೆ ಇದರ ಬಜೆಟ್ 88,000 ಕೋಟಿ ರೂ.ಗಳಿಗಿಂತ ಹೆಚ್ಚು. ಇದರಲ್ಲಿ ಕೇಂದ್ರ ಸರಕಾರದ ಪಾಲು ಸರಿಸುಮಾರು 47,000 ಕೋಟಿ ರೂ. ಗಳಿಗಿಂತ ಹೆಚ್ಚು. ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಪಾಲು ಸುಮಾರು 40,000 ಕೋಟಿ ರೂ.ಗಳಿಗಿಂತ ಹೆಚ್ಚು. ಈ ಯೋಜನೆ ಕೇಂದ್ರದ್ದು ಹೇಗೋ ಹಾಗೆಯೇ ರಾಜ್ಯಗಳದ್ದೂ ಆಗಿದೆ. ಆದರೆ ಈ ಯೋಜನೆಯ ಪೋಸ್ಟರ್‌ಗಳಲ್ಲಿ ಪ್ರಧಾನಿ ಮೋದಿಯವರ ಫೋಟೊ ಮಾತ್ರ ಇದೆ ಅಥವಾ ಯೋಜನೆ ಅವರ ಹೆಸರಿನೊಂದಿಗೆ ಬ್ರಾಂಡ್ ಆಗಿದೆ.

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ನಗರವನ್ನು ಸ್ಮಾರ್ಟ್ ಮಾಡಲಾಗಿದೆಯೇ ಅಥವಾ ನಾಯಕರು ಸ್ಮಾರ್ಟ್ ಆಗಿ ಬೆಳೆದಿದ್ದಾರೆಯೇ ಎಂಬ ಅನುಮಾನವೂ ಕಾಡುತ್ತದೆ.

ಡೆನ್ಮಾರ್ಕ್ ರಾಜಧಾನಿ ಕೋಪನ್ ಹೇಗನ್ ಅನ್ನು ನೋಡಬೇಕು. 10 ವರ್ಷಗಳಲ್ಲಿ ಈ ನಗರದಲ್ಲಿ ಸೈಕ್ಲಿಂಗ್ ಮೂಲಸೌಕರ್ಯ ಅಭಿವೃದ್ಧಿಗಾಗಿ 200 ಮಿಲಿಯನ್ ಡಾಲರ್ ಖರ್ಚು ಮಾಡಲಾಗಿದೆ. ಭಾರತೀಯ ರೂಪಾಯಿಗಳಲ್ಲಿ ಲೆಕ್ಕದಲ್ಲಿ ಸುಮಾರು 1,700 ಕೋಟಿ ರೂ.

ಇವತ್ತು ಕೋಪನ್ ಹೇಗನ್ 239 ಮೈಲಿ ಉದ್ದದ ಸೈಕಲ್ ಟ್ರ್ಯಾಕ್ ಅನ್ನು ಹೊಂದಿದೆ. ಇಡೀ ಡೆನ್ಮಾರ್ಕ್‌ನಲ್ಲಿ 4,770 ಕಿ.ಮೀ. ಸೈಕಲ್ ಟ್ರ್ಯಾಕ್‌ಗಳಿವೆ.ಸೈಕ್ಲಿಂಗ್ ವಿಷಯದಲ್ಲಿ ಇದನ್ನು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ.

ಭಾರತದಲ್ಲಿಯೂ ಸ್ಮಾರ್ಟ್ ಸಿಟಿಗಳು ಆರಂಭವಾಗಿ 10 ವರ್ಷಗಳಾಗಿವೆ. ಆದರೆ 100 ನಗರಗಳಲ್ಲಿ ಯಾವುದಾದರೂ ಒಂದರಲ್ಲಿ ಭಾರತ ಡೆನ್ಮಾರ್ಕ್‌ನ ಗುರಿ ಅಥವಾ ಸ್ಮಾರ್ಟ್‌ನೆಸ್ ಅನ್ನು ಸಾಧಿಸಿದೆಯೇ? ಭಾರತದಲ್ಲಿ ಹವಾಮಾನ ಸೈಕ್ಲಿಂಗ್‌ಗೆ ಅನುಕೂಲಕರವಾಗಿಲ್ಲ ಎಂದು ಹೇಳಿದರೆ ಅದು ಕೇವಲ ಒಂದು ನೆಪ.

ಭಾರತ ಸರಕಾರ ಅಥವಾ ಯಾವುದೇ ರಾಜ್ಯ ಸರಕಾರ ಸಾರ್ವಜನಿಕ ಸಾರಿಗೆ ವಿಷಯದಲ್ಲಿ ಹೆಚ್ಚಿನದೇನನ್ನೂ ಮಾಡಿಲ್ಲ ಅಥವಾ ಅದಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿಲ್ಲ. ಇಲ್ಲೂ ಖಾಸಗಿಯವರೇ ವಕ್ಕರಿಸಿ, ನಗರದ ರಸ್ತೆಗಳು ಹದಗೆಟ್ಟು ಹೋಗಿವೆ.

ಮೋದಿ ಸರಕಾರ ಶೇ. 91ರಷ್ಟು ಕೆಲಸ ಪೂರ್ಣಗೊಂಡಿದೆ ಎಂದು ಹೇಳಿಕೊಳ್ಳುತ್ತಿದೆ. ಅಂದರೆ ನಗರದ ಜನರು ತಮ್ಮ ನಗರ ಸ್ಮಾರ್ಟ್ ಆಗಿದೆ ಎಂದು ತಿಳಿದುಕೊಳ್ಳಬೇಕು.

2016ರಲ್ಲಿ ಮೋದಿ ಅವರು ಸ್ಮಾರ್ಟ್ ಸಿಟಿಗಳನ್ನು ಜನಾಂದೋಲನ ಎಂದು ಕರೆಯತೊಡಗಿದ್ದರು. ಆದರೆ ನಗರಗಳನ್ನು ಸ್ಮಾರ್ಟ್ ಮಾಡುವ ಈ ಜನಾಂದೋಲನ ನಗರಗಳನ್ನು ಎಷ್ಟರ ಮಟ್ಟಿಗೆ ಉದ್ಧಾರ ಮಾಡಿತು, ಬದಲಿಸಿತು?

ಸ್ಮಾರ್ಟ್ ಸಿಟಿ ಮಿಷನ್ ಭಾರತದ 100 ನಗರಗಳ ಚಹರೆಯನ್ನೇ ಬದಲಿಸಿದೆ ಎಂದಾದರೆ ಈ ಪ್ರಯೋಗ ಯಶಸ್ವಿಯಾಗಿದೆ ಎಂದು ಒಪ್ಪಬಹುದು. ಹಾಗೆ ಆಗಿದ್ದಿದ್ದರೆ, ನೀತಿ ಆಯೋಗದ ಮಾಜಿ ಸಿಇಒ ಅಮಿತಾಭ್ ಕಾಂತ್ ಅವರು 2025ರಲ್ಲಿ ಭಾರತೀಯ ನಗರಗಳಿಗೆ ಯೋಜನೆ ಅಗತ್ಯವಿದೆ ಎಂದು ಬರೆಯಬೇಕಾಗುತ್ತಿರಲಿಲ್ಲ.

‘‘ಭಾರತೀಯ ನಗರಗಳು ಈಗ ಕುಸಿತದ ಅಂಚಿನಲ್ಲಿವೆ, ಜನಸಂಖ್ಯೆ ತುಂಬಾ ಹೆಚ್ಚಾಗಿದೆ, ಮಾಲಿನ್ಯ ತುಂಬಾ ಹೆಚ್ಚಾಗಿದೆ, ಆರೋಗ್ಯ ವ್ಯವಸ್ಥೆ ಕಳಪೆಯಾಗಿದೆ’’ ಎಂದು ಅಮಿತಾಭ್ ಕಾಂತ್ ಟ್ವೀಟ್ ಮಾಡಿದ್ದಾರೆ.

ಸ್ಮಾರ್ಟ್ ಸಿಟಿ ಹೆಸರಿನಲ್ಲಿ ಸರಕಾರ ಮಾಡಿದ್ದೇನು ಎಂಬ ಪ್ರಶ್ನೆಯನ್ನು ಕಾಂಗ್ರೆಸ್ ವಕ್ತಾರೆ ಸುಪ್ರಿಯಾ ಶ್ರಿನೇತ್ ಎತ್ತಿದ್ದಾರೆ.

ಈ ಯೋಜನೆಯಡಿಯಲ್ಲಿ 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸಬೇಕಾಗಿತ್ತು. ಸರಕಾರದ ಪ್ರಕಾರ ಕೇವಲ 16 ಮಾತ್ರ ನಿರ್ಮಿಸಲಾಗಿದೆ. ಆದರೆ 84 ಸ್ಮಾರ್ಟ್ ಸಿಟಿಗಳಲ್ಲಿ 14,000 ಕೋಟಿ ರೂ. ಕೆಲಸ ಇನ್ನೂ ಬಾಕಿ ಉಳಿದಿದೆ ಎಂದು ಅವರು ಹೇಳಿದ್ದಾರೆ.

2015ರಲ್ಲಿ ದೊಡ್ಡದಾಗಿ ಟಾಂ ಟಾಂ ಮಾಡಿ 2016ರಲ್ಲಿ ಶುರು ಮಾಡಲಾಯಿತು. 10 ವರ್ಷಗಳಲ್ಲಿ ಮೂರು ಬಾರಿ ಗಡುವು ವಿಸ್ತರಿಸಲಾಯಿತು. 60 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವ ಚರ್ಚೆ ನಡೆಯಿತು. ನಂತರ ಇನ್ನೂ 30 ಸೇರಿಸಲಾಯಿತು. ನಂತರ ಮತ್ತೆ 10 ಸೇರಿಸಲಾಯಿತು. ಅಂತಿಮವಾಗಿ 2023ರ ಮಾರ್ಚ್ ವೇಳೆಗೆ 100 ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸಬೇಕಿತ್ತು. ಆದರೆ ಅದು ಆಗಿಲ್ಲ ಎಂದಿದ್ದಾರೆ.

ಸರಕಾರವೇ ಹೇಳುವಂತೆ, 16 ಸ್ಮಾರ್ಟ್ ಸಿಟಿಗಳನ್ನು ಮಾತ್ರ ನಿರ್ಮಿಸಲಾಗಿದೆ. ಆದರೆ 84 ನಗರಗಳಲ್ಲಿ 14,000 ಕೋಟಿ ರೂ. ಕೆಲಸ ಹಾಗೇ ಬಿದ್ದಿದೆ. ಹಾಗಾದರೆ ಸ್ಮಾರ್ಟ್ ಸಿಟಿಗೆ ಮಾನದಂಡವೇನು? ಎಂದು ಅವರು ಕೇಳಿದ್ದಾರೆ.

ಒಂದು ನಗರ ಸ್ಮಾರ್ಟ್ ಸಿಟಿ ಆಗುವುದು ಹೇಗೆ ಎಂಬುದರ ಬಗ್ಗೆ ಅವರು ಮಾನದಂಡಗಳ ಪಟ್ಟಿ ಕೊಟ್ಟಿದ್ದಾರೆ.

ಮೊದಲನೆಯದಾಗಿ, ಸಂಪೂರ್ಣ ನೀರು ಮತ್ತು ವಿದ್ಯುತ್ ಪೂರೈಕೆ. ಎರಡನೆಯದಾಗಿ, ನೈರ್ಮಲ್ಯ ಮತ್ತು ಘನತ್ಯಾಜ್ಯ ನಿರ್ವಹಣೆ. ಮೂರನೆಯದಾಗಿ, ಉತ್ತಮ ಸಾರ್ವಜನಿಕ ಸಾರಿಗೆ. ನಾಲ್ಕನೆಯದಾಗಿ, ಇ-ಆಡಳಿತ ಮತ್ತು ಡಿಜಿಟಲೀಕರಣ, ಐಟಿ ರೋಬೋಟ್ ವ್ಯವಸ್ಥೆಗಳು ಇರಬೇಕು. ನಾಗರಿಕರ ಪಾಲ್ಗೊಳ್ಳುವಿಕೆ ಇರಬೇಕು.

ಸರಕಾರ ಪೂರ್ಣಗೊಳಿಸಿದೆ ಎಂದಿರುವ 16 ಸ್ಮಾರ್ಟ್ ಸಿಟಿಗಳಾದರೂ ಎಲ್ಲಾ ಮಾನದಂಡಗಳನ್ನು ಮುಟ್ಟಿವೆಯೇ ಎಂದು ಸುಪ್ರಿಯಾ ಶ್ರಿನೇತ್ ಪ್ರಶ್ನಿಸಿದ್ದಾರೆ.

ಈಗ, ನಗರ ಸ್ಮಾರ್ಟ್ ಆಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಹೇಗೆ ನಿರ್ಣಯಿಸುವುದು ಎಂಬುದೇ ಪ್ರಶ್ನೆ.

ಸ್ಮಾರ್ಟ್ ಸಿಟಿ ಮಿಷನ್‌ನ ಹೇಳಿಕೆಯಲ್ಲಿ ಮೊದಲೇ ಸರಕಾರ ಜಾಣತನ ತೋರಿಸಿದೆ. ಸ್ಮಾರ್ಟ್ ಸಿಟಿ ಅಂದರೆ ಏನು ಎಂದು ಹೇಳುತ್ತ ಸರಕಾರ, ಸ್ಮಾರ್ಟ್ ಸಿಟಿಗೆ ಸಾರ್ವತ್ರಿಕವಾಗಿ ಒಂದೇ ಥರದ ವ್ಯಾಖ್ಯಾನವಿಲ್ಲ ಎಂದುಬಿಟ್ಟಿದೆ. ಸ್ಮಾರ್ಟ್ ಸಿಟಿ ಎಂದೊಡನೆ ಅದು ಯುರೋಪ್‌ನ ಸ್ಮಾರ್ಟ್ ಸಿಟಿಯಂತೆಯೇ ಇರಬೇಕಿಲ್ಲ. ಭಾರತದಲ್ಲಿ ಬೇರೆ ಇರುತ್ತದೆ ಎಂದಿದೆ.

ಹೀಗೆ, ಯುರೋಪ್‌ನ ಸ್ಮಾರ್ಟ್ ಸಿಟಿಗಳನ್ನು ಭಾರತದ ಸ್ಮಾರ್ಟ್ ಸಿಟಿಗಳೊಂದಿಗೆ ಹೋಲಿಸಬೇಡಿ ಎಂದು ಮೊದಲೇ ಹೇಳಿಬಿಡಲಾಗಿದೆ. ಮಿಷನ್ ಸ್ಟೇಟ್‌ಮೆಂಟ್‌ನಲ್ಲಿಯೇ ಬುದ್ಧಿವಂತಿಕೆ ತೋರಿಸಲಾಗಿದೆ. ಹಾಗಾಗಿ ಜನರೀಗ ಕೋಪನ್ ಹೇಗನ್ ತೋರಿಸಿ, ನಮ್ಮಲ್ಲಿ ಏನು ಮಾಡಿದ್ದೀರಿ ಎಂದು ಕೇಳುವ ಹಾಗಿಲ್ಲ.

ಆದರೆ ಸ್ಮಾರ್ಟ್ ಸಿಟಿ ಅಲ್ಲಿಗಿಂತ ಇಲ್ಲಿ ಭಿನ್ನ ಎನ್ನುವುದಾದರೆ, ಅದಕ್ಕೊಂದು ಸಾರ್ವತ್ರಿಕ ವ್ಯಾಖ್ಯಾನ ಇಲ್ಲವೆಂದಾದರೆ, ಯೋಜನೆಗೆ ಆ ಹೆಸರನ್ನೇಕೆ ಇಡಬೇಕಿತ್ತು? ಒಂದೇ ಹೆಸರನ್ನು ಏಕೆ ಕೊಡಲಾಯಿತು?

2017ರಲ್ಲಿ ಪಾಟ್ನಾವನ್ನು ಸ್ಮಾರ್ಟ್ ಸಿಟಿಯಲ್ಲಿ ಸೇರಿಸಲಾಯಿತು. 2023ರಲ್ಲಿ ಪಾಟ್ನಾ 446 ನಗರಗಳಲ್ಲಿ 77ನೇ ಸ್ಥಾನದಲ್ಲಿತ್ತು. 7 ವರ್ಷಗಳಲ್ಲಿ ಪಾಟ್ನಾದಲ್ಲಿನ ಸ್ಮಾರ್ಟ್ ಸಿಟಿ ಯೋಜನೆಗಳಲ್ಲಿ ಪೂರ್ಣವಾಗಿರುವುದು ಅರ್ಧದಷ್ಟು ಮಾತ್ರ ಎಂದು ಕಳೆದ ವರ್ಷ ಅಕ್ಟೋಬರ್‌ನಲ್ಲಿ ‘ಟೈಮ್ಸ್ ಆಫ್ ಇಂಡಿಯಾ’ದಲ್ಲಿ ಪ್ರಕಟವಾದ ವರದಿ ಹೇಳಿತ್ತು.

ಇದು ಒಂದು ಪಾಟ್ನಾದ ಕಥೆಯಲ್ಲ ಎಂಬುದನ್ನು ಬಿಡಿಸಿ ಹೇಳಬೇಕಿಲ್ಲ. ಈ ಯೋಜನೆಯಲ್ಲಿ ಹಣದ ನಿರ್ವಹಣೆಯೂ ಸರಿಯಾಗಿಲ್ಲ ಎಂದು ಕಾಣುತ್ತದೆ.

ಇತ್ತೀಚಿನ ದಿನಗಳಲ್ಲಿ ಪ್ರಧಾನಿ ಮೋದಿಯಿಂದ ಹಿಡಿದು ಗೃಹ ಸಚಿವ ಅಮಿತ್ ಶಾ ವರೆಗೆ ಎಲ್ಲರೂ ಬಿಹಾರಕ್ಕೆ ಸಾಕಷ್ಟು ಭೇಟಿ ನೀಡುತ್ತಿದ್ದಾರೆ ಮತ್ತು ಚುನಾವಣೆ ಇರುವುದರಿಂದ ಭೇಟಿ ನೀಡುತ್ತಲೇ ಇರುತ್ತಾರೆ.

ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಆಯ್ಕೆಯಾದ ಬಿಹಾರದ ಮೊದಲ ನಗರ ಭಾಗಲ್ಪುರ್. ಇದನ್ನು ಕನಿಷ್ಠ ಪಕ್ಷ ಪಾಟ್ನಾದ ಜನರು ಭಾಗಲ್ಪುರದ ಸ್ಮಾರ್ಟ್‌ನೆಸ್ ನೋಡಲು ಹೋಗುವಷ್ಟು ಮಟ್ಟಿಗಾದರೂ ಸ್ಮಾರ್ಟ್ ಮಾಡಬೇಕಾಗಿತ್ತು.ಆದರೆ ಆಗಿಲ್ಲ.

ನಗರಗಳಲ್ಲಿ ಮಾಡುವ ಅತ್ಯಂತ ಸಾಮಾನ್ಯ ಕೆಲಸಗಳನ್ನು ಸಹ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿಸಲಾಗಿದೆ. ಪಾದಚಾರಿ ಸೇತುವೆಗಳನ್ನು ಈ ಹಿಂದೆಯೂ ನಿರ್ಮಿಸಲಾಗಿತ್ತು ಮತ್ತು ಈಗಲೂ ಅವುಗಳನ್ನು ನಿರ್ಮಿಸಲಾಗುತ್ತಿದೆ. ಅಂತಹ ವಿಷಯಗಳನ್ನು ಸೇರಿಸುವ ಮೂಲಕ ಯೋಜನೆಗಳ ಸಂಖ್ಯೆ ಹೆಚ್ಚಿಸಲಾಗಿದೆ. ಹಿಂದಿನಿಂದಲೂ ಟ್ರಾಫಿಕ್ ಸಿಗ್ನಲ್‌ಗಳನ್ನು ಅಳವಡಿಸಲಾಗುತ್ತಿದ್ದರೂ, ಅದನ್ನೂ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಸೇರಿಸಲಾಗಿದೆ. ಈ ಎಲ್ಲಾ ಕೆಲಸಗಳನ್ನು ಯಾವುದೇ ನಗರದಲ್ಲಿ 1 ವರ್ಷದೊಳಗೆ ಪೂರ್ಣಗೊಳಿಸಬೇಕು. ಆದರೆ ಆಗಿರುವುದೇನು?

ಯೋಜನೆಗಳು ಅಪೂರ್ಣವಾಗಿ ಉಳಿದಿವೆಯೇ ಅಥವಾ ಪೂರ್ಣಗೊಂಡಿವೆಯೇ ಎಂಬುದು ವಿಷಯವಲ್ಲ. ಸಮಸ್ಯೆಯೆಂದರೆ, ಯೋಜನೆಗಳು ಪೂರ್ಣಗೊಂಡ ನಂತರವೂ ಆ ನಗರ ಸ್ಮಾರ್ಟ್ ಆಗಿದೆಯೇ, ಅಲ್ಲಿನ ಜೀವನ ಮಟ್ಟ ಸುಧಾರಿಸಿದೆಯೇ ಎಂಬುದು.

ಸ್ಮಾರ್ಟ್ ಸಿಟಿ ಧ್ಯೇಯ ಕುರಿತ ಹೇಳಿಕೆಯಲ್ಲಿ, ಜೀವನಮಟ್ಟ ಸುಧಾರಿಸಲು ಮೂಲಸೌಕರ್ಯವನ್ನು ಸುಧಾರಿಸಬೇಕು ಎಂದು ಬರೆಯಲಾಗಿದೆ. ಆದರೆ ಯಾವ ನಗರದಲ್ಲಿ ಜೀವನ ಮಟ್ಟ ಸುಧಾರಿಸಿದೆ?

ಹಂಗರಿಯ ರಾಜಧಾನಿ ಬುಡಾಪೆಸ್ಟ್ ಉದಾಹರಣೆ ನೋಡುವುದಾದರೆ, ಸ್ಮಾರ್ಟ್ ಸಿಟಿ ಮಿಷನ್ ಒಪ್ಪಿಕೊಂಡ 3 ವರ್ಷಗಳಲ್ಲಿ ಅದು ವಿಶ್ವದ ಅತ್ಯುತ್ತಮ ನಗರಗಳಲ್ಲಿ ಒಂದಾಯಿತು. ಆದರೆ ಇಲ್ಲಿ 10 ವರ್ಷಗಳ ನಂತರವೂ ನಾವು ಒಂದೇ ಒಂದು ನಗರವನ್ನು ವಿಶ್ವ ದರ್ಜೆಯ ನಗರವನ್ನಾಗಿ ಮಾಡಲು ಸಾಧ್ಯವಾಗಲಿಲ್ಲ. ಇದು ಯಾರ ವೈಫಲ್ಯ?

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ಎನ್. ಕೇಶವ್

contributor

Similar News