ನನ್ನ ಮಗನಿಗೆ 5 ಕೋಟಿ ರೂ. ಬಹುಮಾನ, ಪುಣೆಯಲ್ಲಿ ಫ್ಲಾಟ್ ನೀಡಬೇಕು : ಪ್ಯಾರಿಸ್ ಒಲಿಂಪಿಕ್ಸ್ ಪದಕ ವಿಜೇತ ಸ್ವಪ್ನಿಲ್ ಕುಸಾಲೆ ಅವರ ತಂದೆಯ ಬೇಡಿಕೆ
ಮುಂಬೈ : ಮಹಾರಾಷ್ಟ್ರ ಸರಕಾರವು ತನ್ನ ಮಗನಿಗೆ 2 ಕೋಟಿ ರೂ. ಬಹುಮಾನ ನೀಡಿರುವುದಕ್ಕೆ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ ಶೂಟಿಂಗ್ನಲ್ಲಿ ಕಂಚಿನ ಪದಕ ವಿಜೇತ ಸ್ವಪ್ನಿಲ್ ಕುಸಾಲೆ ಅವರ ತಂದೆ ಸುರೇಶ್ ಕುಸಾಲೆ ಬೇಸರ ವ್ಯಕ್ತಪಡಿಸಿದ್ದಾರೆ. ಹರ್ಯಾಣ ಸರಕಾರವು ತನ್ನ ರಾಜ್ಯದ ಕ್ರೀಡಾಪಟುಗಳಿಗೆ ಹೆಚ್ಚಿನ ಮೊತ್ತದ ಬಹುಮಾನ ನೀಡುತ್ತಿದ್ದು, ತನ್ನ ಮಗನಿಗೂ 5 ಕೋಟಿ ರೂ. ಬಹುಮಾನದ ಜೊತೆಗೆ ಪುಣೆಯಲ್ಲಿ ಫ್ಲಾಟ್ ಅನ್ನು ನೀಡಬೇಕೆಂಬ ಬೇಡಿಕೆ ಮುಂದಿಟ್ಟಿದ್ದಾರೆ.
ಕೊಲ್ಹಾಪುರ ಮೂಲದ ಸ್ವಪ್ನಿಲ್ ಕುಸಾಲೆ ಆಗಸ್ಟ್ನಲ್ಲಿ ಪ್ಯಾರಿಸ್ ಒಲಿಂಪಿಕ್ಸ್ನಲ್ಲಿ 50 ಮೀ. ರೈಫಲ್3 ಪೊಸಿಶನ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಜಯಿಸಿದ್ದರು.
ನನ್ನ ಮಗ 5 ಕೋಟಿ ರೂ. ಬಹುಮಾನ ಮೊತ್ತವಲ್ಲದೆ, ಪುಣೆಯ ಬಾಲೆವಾಡಿಯಲ್ಲಿರುವ ಛತ್ರಪತಿ ಶಿವಾಜಿ ಮಹಾರಾಜ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಸಮೀಪ ಫ್ಲಾಟ್ ಸಿಗಬೇಕಾಗಿದೆ. ಹರ್ಯಾಣ ಸರಕಾರವು ತನ್ನ ಒಲಿಂಪಿಕ್ಸ್ ಪದಕ ವಿಜೇತ ಕ್ರೀಡಾಪಟುಗಳಿಗೆ ಹೆಚ್ಚಿನ ಮೊತ್ತವನ್ನು ನೀಡುತ್ತದೆ ಎಂದು ಸುರೇಶ್ ಕುಸಾಲೆ ಹೇಳಿದ್ದಾರೆ.
ಕೊಲ್ಹಾಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಸಾಲೆ, ಹರ್ಯಾಣ ಸರಕಾರವು ಪ್ರತಿಯೊಬ್ಬ ಒಲಿಂಪಿಕ್ಸ್ ಪದಕ ವಿಜೇತರಿಗೆ 5 ಕೋಟಿ ರೂ. ಬಹುಮಾನ ನೀಡುತ್ತದೆ. 72 ವರ್ಷಗಳ ನಂತರ ವೈಯಕ್ತಿಕ ವಿಭಾಗದಲ್ಲಿ ಒಲಿಂಪಿಕ್ಸ್ ಪದಕ ಗೆದ್ದಿರುವ ಮಹಾರಾಷ್ಟ್ರದ ಎರಡನೇ ಅತ್ಲೀಟ್ ಸ್ವಪ್ನಿಲ್ಗೆ ಕೇವಲ 2 ಕೋಟಿ ರೂ. ನೀಡಲಾಗಿದೆ. ಮಹಾರಾಷ್ಟ್ರಕ್ಕೆ ಹೋಲಿಸಿದರೆ ಹರ್ಯಾಣ ಸಣ್ಣ ರಾಜ್ಯ, ಆದರೆ ಅದು ಪದಕ ವಿಜೇತ ಅತ್ಲೀಟ್ಗಳಿಗೆ ಗರಿಷ್ಠ ಮೊತ್ತದ ಬಹುಮಾನ ನೀಡುತ್ತಿದೆ. ಸ್ವಪ್ನಿಲ್ಗೆ 5 ಕೋಟಿ ರೂ. ಬಹುಮಾನದ ಜೊತೆಗೆ ಅಭ್ಯಾಸಕ್ಕೆ ಅನುವು ಮಾಡಿಕೊಡಲು ಬಾಲೆವಾಡಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಬಳಿ ಫ್ಲಾಟ್ ನೀಡಬೇಕೆಂದು ಒತ್ತಾಯಿಸಿದರು.
ಪ್ಯಾರಿಸ್ ಸಾಧನೆಯ ನಂತರ ಸ್ವಪ್ನಿಲ್ಗೆ ಸೆಂಟ್ರಲ್ ರೈಲ್ವೆಯಲ್ಲಿ ಭಡ್ತಿ ನೀಡಲಾಗಿದೆ.