ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ: ಯತಿ ನರಸಿಂಹಾನಂದ ಗಿರಿ ವಿರುದ್ಧ ಪ್ರಕರಣ ದಾಖಲು

ಯತಿ ನರಸಿಂಹಾನಂದ ಗಿರಿ (PTI)
ಲಕ್ನೋ: ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ, ವೀಡಿಯೊ ಮೂಲಕ ದ್ವೇಷ ಹರಡಿದ ಮತ್ತು ಜಿಲ್ಲೆಯ ಉನ್ನತ ಪೊಲೀಸ್ ಅಧಿಕಾರಿಗಳನ್ನು ನಿಂದಿಸಿದ ಆರೋಪದಲ್ಲಿ ವಿವಾದಾತ್ಮಕ ಅರ್ಚಕ ಯತಿ ನರಸಿಂಹಾನಂದ ಗಿರಿ ವಿರುದ್ಧ ಗಾಝಿಯಾಬಾದ್ನಲ್ಲಿ ಪ್ರಕರಣ ದಾಖಲಿಸಲಾಗಿದೆ.
ಎಫ್ಐಆರ್ ಪ್ರಕಾರ, ಮಹಾತ್ಮ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ, ಕ್ರಿಮಿನಲ್ ಬೆದರಿಕೆ, ಅವಮಾನ, ಮಾನಹಾನಿ, ಸಾರ್ವಜನಿಕ ಶಾಂತಿ ಕದಡುವ ಉದ್ದೇಶದಿಂದ ಅವಹೇಳನಾಕಾರಿ ಪದ ಬಳಕೆ ಮತ್ತು ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪದಲ್ಲಿ ಯತಿ ನರಸಿಂಹಾನಂದ ಗಿರಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಇದಲ್ಲದೆ ಗಾಝಿಯಾಬಾದ್ ಪೊಲೀಸ್ ಕಮಿಷನರ್ ಮತ್ತು ಲೋನಿ ವಿಭಾಗದ ಸಹಾಯಕ ಪೊಲೀಸ್ ಕಮಿಷನರ್ ವಿರುದ್ಧ ವೀಡಿಯೊದಲ್ಲಿ ನಿಂದನೀಯ ಪದಗಳನ್ನು ಬಳಸಿರುವ ಬಗ್ಗೆ ಆರೋಪಿಸಲಾಗಿದೆ.
ಈ ಕುರಿತು ಉಪ ಪೊಲೀಸ್ ಆಯುಕ್ತ ಸುರೇಂದ್ರ ನಾಥ್ ತಿವಾರಿ ಪ್ರತಿಕ್ರಿಯಿಸಿ, ಕೋಮು ಸೌಹಾರ್ದತೆಯನ್ನು ಕೆರಳಿಸುವ ಉದ್ದೇಶದಿಂದ ಯತಿ ನರಸಿಂಹಾನಂದ ಹೇಳಿಕೆಯನ್ನು ನೀಡಿದ್ದಾರೆ. ಈ ಕುರಿತು ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದರು.