ಸಾರ್ವಜನಿಕ ಶೌಚಾಲಯವನ್ನು ನಿರಾಕರಿಸುತ್ತಿರುವ ವಿಜಯನಗರ ಜಿಲ್ಲೆಯ ಹೊಸೂರು ಗ್ರಾಮಸ್ಥರು!

Update: 2024-06-29 06:41 GMT

ವಿಜಯನಗರ, ಜೂ.28: ‘ನಾವು ಬಹಿರ್ದೆಸೆಗೆ ಬಳಸುತ್ತಿರುವ ಬಯಲಿಗೆ ಸುತ್ತ ಕಾಂಪೌಂಡ್ ಮಾಡಿ ಕೊಡುವುದಾದರೆ ಕೊಡಿ, ಅಷ್ಟು ಮಾಡಿ ಪುಣ್ಯ ಕಟ್ಟಿಕೊಳ್ಳ್ಳಿ, ಅದರ ಬದಲು ನೀವು ಶೌಚಾಲಯ, ನೀರು ಕೊಡುತ್ತೇವೆ ಅಂದರೆ ನಮಗೆ ಅದು ಬೇಡವೇ ಬೇಡ’ ಇದು ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊಸೂರು ಗ್ರಾಮದ ಮಹಿಳೆಯೊಬ್ಬರ ಮಾತುಗಳು.

ಸರಿಯಾದ ಶೌಚಾಲಯ ವ್ಯವಸ್ಥೆಯಿಲ್ಲದೆ ಆಡಳಿತಕ್ಕೆ, ಅಧಿಕಾರಿಗಳಿಗೆ ಹಿಡಿಶಾಪ ಹಾಕುವ ಜನರನ್ನು ಸಾಮಾನ್ಯವಾಗಿ ನಾವು ನೋಡಿರುತ್ತೇವೆ. ಆದರೆ, ಇಲ್ಲೊಂದು ಗ್ರಾಮದ ಜನರು ತಮ್ಮ ಊರಿಗೆ ಸುಸಜ್ಜಿತ ಶೌಚಾಲಯ ಕಟ್ಟಲೆಂದೇ 25 ಲಕ್ಷ ರೂಪಾಯಿ ಅನುದಾನವನ್ನು ಸರಕಾರ ಕೊಟ್ಟಿದ್ದರೂ, ನಮ್ಮ ಊರಿಗೆ ಶೌಚಾಲಯವೇ ಬೇಡ ಎಂದು ಹಠ ಹಿಡಿದಿದ್ದಾರೆ. ಅಷ್ಟೇ ಅಲ್ಲ ಶೌಚಾಲಯ ನಿರ್ಮಾಣದ ವಿರುದ್ಧ ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಅಲ್ಲದೇ ಗ್ರಾಮ ಪಂಚಾಯತ್‌ಗೆ ತೆರಳಿ ಅಧಿಕಾರಿಗಳ ಬಳಿ ‘ಶೌಚಾಲಯ ಬೇಡ, ಬಹಿರ್ದೆಸೆಗೆ ನಾವು ಬಯಲನ್ನೇ ಬಳಸುತ್ತೇವೆ’ ಎಂದು ಮನವಿ ಮಾಡಿದ ವಿಚಿತ್ರ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯ ಹೊಸೂರು ಗ್ರಾಮದಲ್ಲಿ ನಡೆದಿದೆ.

ಹೊಸೂರು ಗ್ರಾಮದ ಜನರು ಶೌಚಾಲಯ ಇಲ್ಲದೆ, ಬಹಿರ್ದೆಸೆಗೆ ಊರವರೆಲ್ಲಾ ಬಯಲನ್ನೇ ಅವಲಂಬಿಸುವುದನ್ನು ಗಮನಿಸಿದ ಪಂಚಾಯತ್ ಅಧಿಕಾರಿಗಳು ಸರಕಾರದ ಗಮನಕ್ಕೆ ತಂದಿದ್ದಾರೆ. ಹಾಗೆಯೇ 25 ಲಕ್ಷ ರೂಪಾಯಿ ವೆಚ್ಚದಲ್ಲಿ ಮಾದರಿ ಸಾಮೂಹಿಕ ಶೌಚಾಲಯವನ್ನು ನಿರ್ಮಿಸಲು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮ ಅನುದಾನ ಕೂಡಾ ನೀಡಿತ್ತು. ಆದರೆ, ಹೊಸೂರು ಜನರಿಗೆ ಯಾವಾಗ ತಮ್ಮ ಊರಿಗೆ ಹೊಸ ಶೌಚಾಲಯ ನಿರ್ಮಾಣ ಆಗುತ್ತೆ ಅಂತ ತಿಳಿಯಿತೋ ಅಲ್ಲಿಂದ ಶುರುವಾಯ್ತು ಆಕ್ರೋಶ, ಪ್ರತಿಭಟನೆ, ಅದರ ವಿರುದ್ಧ ಮನವಿ ನೀಡುವುದು ಎಲ್ಲವೂ.

ಈ ಬಗ್ಗೆ ತಿಳಿಯಲು ಖುದ್ದು ಹೊಸೂರು ಗ್ರಾಮಕ್ಕೆ ತೆರಳಿದ ‘ವಾರ್ತಾಭಾರತಿ’ ವರದಿಗಾರರನ್ನು ಅಲ್ಲಿನ ಜನರು ಸುತ್ತುವರಿದುಕೊಂಡು ಸಾರ್, ದಯವಿಟ್ಟು ನಮಗೆ ಶೌಚಾಲಯ ಬೇಡವೇ ಬೇಡ, ಹೇಗಾದರೂ ಮಾಡಿ ಅದನ್ನು ಸ್ಥಗಿತಗೊಳಿಸಬೇಕು ಎಂದು ಅಲವತ್ತುಕೊಂಡಿದ್ದಾರೆ. ಜನರ ಈ ಆಕ್ರೋಶಕ್ಕೆ ಕಾರಣವೇನು ಎಂದು ವಿಚಾರಿಸಿದಾಗ ಅಧಿಕಾರಿಗಳ ಘೋರ ನಿರ್ಲಕ್ಷ್ಯವೇ ಇದಕ್ಕೆಲ್ಲಾ ಮೂಲ ಕಾರಣ ಎಂಬುದು ಗೊತ್ತಾಗಿದೆ.

ಹೊಸೂರು ಗ್ರಾಮದ ಎರಡು ಪ್ರದೇಶಗಳಲ್ಲಿ ಜನರು ವಾಸ ಮಾಡುತ್ತಾರೆ. ಒಂದು ಕಡೆ ಈಗಾಗಲೇ ಅಲ್ಲಲ್ಲಿ ಕೆಲವು ಶೌಚಾಲಯಗಳು ಹೆಸರಿಗಷ್ಟೇ ಇವೆ. ಕಾಂಕ್ರೀಟ್ ಕಟ್ಟಡ ಇದೆ ಎಂಬುದು ಬಿಟ್ಟರೆ ಬೇರೆ ಯಾವುದೇ ಸೌಕರ್ಯ ಅಲ್ಲಿಲ್ಲ. ನೀರಾಗಲಿ, ಬಾಗಿಲಾಗಲಿ, ಮೇಲ್ಚಾವಣಿಯಾಗಲಿ, ಶುಚಿತ್ವ ಆಗಲಿ ಏನೂ ಇಲ್ಲ. ಜೊತೆಗೆ ನಿರ್ವಹಣೆ ಆಗದೆ ಸುತ್ತಲೂ ಪೊದೆಗಳಿಂದ ತುಂಬಿ ಅಲ್ಲಿಗೆ ಕಾಲಿಡಲೂ ಆಗದಂತಹ ದುರ್ವಾಸನೆ ಬೀರುವ ಪರಿಸ್ಥಿತಿ ಇದೆ. ಹಾಗಾಗಿ ಅಲ್ಲಿ ಸುತ್ತಮುತ್ತಲಿನ ಜನರು ಈ ಕೊಳಕು ಶೌಚಾಲಯಕ್ಕಿಂತಲೂ ಬಯಲೇ ಲೇಸು ಅಂತ ಬಯಲನ್ನೇ ಬಳಸುತ್ತಿದ್ದಾರೆ.

ಈಗ ಇರುವ ಬಯಲಿನಲ್ಲಿ ನೀವೇನಾದರೂ ಶೌಚಾಲಯ ಕಟ್ಟಿದರೆ ಮುಂದೆ ಉಳಿದ ಜಾಗವನ್ನು ಯಾರಿಗಾದರೂ ಮಾರಾಟ ಮಾಡುತ್ತಾರೆ. ಆಗ ನಮಗೆ ಶೌಚಾಲಯವೂ ಇಲ್ಲ, ಅತ್ತ ಬಯಲೂ ಇಲ್ಲದಂತಹ ಪರಿಸ್ಥಿತಿ ಎದುರಾಗುತ್ತೆ ಎನ್ನುತ್ತಾರೆ ಗ್ರಾಮಸ್ಥರು.

ನಿರ್ವಹಣೆ ಸಮಸ್ಯೆ

ಇರುವ ಶೌಚಾಲಯ ಗಬ್ಬು ನಾಥ ಬೀರುತ್ತಿದೆ. ಈಗ ಯಾರಿದಲೋ ದುಡ್ಡು ತೆಗೊಂಡು ಈ ಜಾಗದಲ್ಲಿ ಶೌಚಾಲಯ ಕಟ್ಟಲು ಹೊರಟಿದ್ದಾರೆ. ಶೌಚಾಲಯ ಕಟ್ಟಿ ಉಳಿದ ಜಾಗವನ್ನು ಮಾರುತ್ತಾರೆ. ಇಲ್ಲಿ ಕುಡಿಯುವ ನೀರಿಗೆ ಸಮಸ್ಯೆ ಇದೆ. ಅದನ್ನು ಪರಿಹರಿಸಿಲ್ಲ. ಶೌಚಾಲಯ ಕಟ್ಟಿದರೂ ನಿರ್ವಹಣೆ ಸಮಸ್ಯೆ ಇದೆ ಎನ್ನುತ್ತಾರೆ ಗ್ರಾಮದ ಮಹಿಳೆ ಭೂಮಿಕಾ.

ಶುಚಿತ್ವ ಇಲ್ಲ

ಬಹಿರ್ದೆಸೆಗೆ ಬಯಲು ಜಾಗವೇ ಉತ್ತಮ. ಶೌಚಾಲಯ ಕಟ್ಟಿದರೆ ಯಾವಾಗ ನೋಡಿದರೂ ಶುಚಿತ್ವ ಇರಲ್ಲ. ಸರಿಯಾಗಿ ನೀರು ಹಾಕಲ್ಲ. ಒಬ್ಬರು ಬಳಸಿದರೆ ಇನ್ನೊಬ್ಬರು ಬಳಸಲು ಆಗದಂತಹ ಪರಿಸ್ಥಿತಿ ಬರುತ್ತದೆ. ಈಗಾಗಲೇ ಕಟ್ಟಿರುವ ಶೌಚಾಲಯಗಳಿಂದ ಈ ವಿಚಾರ ತಿಳಿಯುತ್ತದೆ.

-ನೀಲಮ್ಮ, ಗ್ರಾಮದ ಮಹಿಳೆ

ದಶಕಗಳಿಂದ ನಾವು ಈ ಊರಿನಲ್ಲಿದ್ದೇವೆ. ಇದುವರೆಗೂ ಏನೂ ಸಮಸ್ಯೆ ಇಲ್ಲ. ನಾವು ಬಹಿರ್ದೆಸೆಗೆ ಬಯಲನ್ನೇ ಬಳಸುತ್ತೇವೆ. ಶೌಚಾಲಯ ನಿರ್ಮಾಣದ ಅಗತ್ಯ ನಮಗಿಲ್ಲ.

-ಗುಳಿಗಮ್ಮ, ಗ್ರಾಮದ ಮಹಿಳೆ

ಸುಸಜ್ಜಿತ ಶೌಚಾಲಯ ಕಟ್ಟುವ ಉದ್ದೇಶ: ಸದಾಶಿವ ಪ್ರಭು

ಹೊಸೂರು ಗ್ರಾಮದಲ್ಲಿ ಸುಸಜ್ಜಿತ ಶೌಚಾಲಯ ಕಟ್ಟಲು 25 ಲಕ್ಷ ರೂ. ಅನುದಾನ ಬಿಡುಗಡೆ ಆಗಿದೆ. ಹಿಂದೆ ಅಲ್ಲಿ ಕಟ್ಟಿರುವುದು ಮೂರು ಲಕ್ಷ ರೂ ವೆಚ್ಚದ ಶೌಚಾಲಯ. ಆದರೆ, ಇದು ಹಾಗಲ್ಲ. ಎಲ್ಲ ವ್ಯವಸ್ಥೆಗಳು ಅಲ್ಲಿರುತ್ತವೆ. ಶೌಚಾಲಯ ನಿರ್ಮಾಣದ ಬಗ್ಗೆ ಯಾಕೆ ವಿರೋಧವಿದೆ ಎಂಬುದರ ಬಗ್ಗೆ ಜನರ ಜೊತೆ ಮಾತನಾಡಿ ಅವರ ಸಮಸ್ಯೆಗಳನ್ನು ಪರಿಹರಿಸುತ್ತೇವೆ. ಬಯಲು ಬಹಿರ್ದೆಸೆ ಮುಕ್ತ ಗ್ರಾಮ ಮಾಡುವ ಉದ್ದೇಶ ನಮ್ಮದು. ಹಾಗಾಗಿ ನೈರ್ಮಲ್ಯದ ಕಡೆಗೆ ಹೆಚ್ಚು ಗಮನ ಕೊಟ್ಟಿದ್ದೇವೆ. ಕುಡಿಯುವ ನೀರು ಕಲುಷಿತಗೊಂಡಿದೆ ಎಂಬ ದೂರುಗಳಿದ್ದವು. ಅದನ್ನು ಪರಿಶೀಲಿಸಿದ್ದೇವೆ. ಈ ಯೋಜನೆಯ ಪೂರ್ಣ ಪ್ರಯೋಜನವನ್ನು ಎಲ್ಲ ಗ್ರಾಮಸ್ಥರು ಪಡೆದುಕೊಳ್ಳಬೇಕು ಎಂದು ವಿನಂತಿ ಮಾಡುತ್ತೇನೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಸದಾಶಿವ ಪ್ರಭು.ಬಿ ತಿಳಿಸಿದ್ದಾರೆ.

ಬಯಲೇ ಸಾಕು

ನಮಗೆ ಶೌಚಾಲಯ ಬೇಡ. ಹೊಸೂರು ಜಾತ್ರೆಗೆ ತುಂಬಾ ಮಂದಿ ಬರ್ತಾರೆ. ಆಗ ಎಲ್ಲರಿಗೂ ಬಳಸಲು ಶೌಚಾಲಯ ವ್ಯವಸ್ಥೆ ಸಾಕಾಗಲ್ಲ. ಬಯಲಾದರೆ ಒಳ್ಳೆಯದು. ಆ ಜಾಗವನ್ನು ದಯವಿಟ್ಟು ಮುಟ್ಟಬೇಡಿ.

-ಲಕ್ಷ್ಮೀ, ಗ್ರಾಮದ ಮಹಿಳೆ

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಮಹಮ್ಮದ್ ಗೌಸ್, ವಿಜಯನಗರ

contributor

Similar News