ಆ್ಯಸಿಡ್ ದಾಳಿ ಅಪರಾಧಿ ಮರಣದಂಡನೆಗೆ ಯೋಗ್ಯ

Update: 2023-12-13 04:40 GMT

ಕೆಳಗಿನ ► ಪ್ಲೇ ಬಟನ್ ಕ್ಲಿಕ್ ಮಾಡಿ ಸಂಪಾದಕೀಯದ ಆಡಿಯೋ ಆಲಿಸಿ

Full View

ಜಗತ್ತಿನಲ್ಲೇ ಭಾರತ ಮಹಿಳೆಯರಿಗೆ ಅತ್ಯಂತ ಅಪಾಯಕಾರಿ ಸ್ಥಳ ಎಂದು ಅಧ್ಯಯನವೊಂದು ಹೇಳುತ್ತದೆ. ಭಾರತದಲ್ಲಿ ಹೆಚ್ಚುತ್ತಿರುವ ಮಹಿಳಾ ದೌರ್ಜನ್ಯದ ಅಂಕಿಅಂಶಗಳ ಆಧಾರದಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. 2014ರಲ್ಲಿ ಪ್ರಧಾನಿಯಾಗಿ ಕೆಂಪುಕೋಟೆಯಲ್ಲಿ ನಿಂತು ಮೋದಿಯವರು ಮಾಡಿದ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯ ಅತ್ಯಾಚಾರಗಳ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದರು. ಆದರೆ ಈ ಭಾಷಣದ ಬಳಿಕವೂ ಈ ದೇಶದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. 2021ರಲ್ಲಿ ಒಟ್ಟು 60 ಲಕ್ಷ ಅಪರಾಧ ಪ್ರಕರಣಗಳಲ್ಲಿ 4,28,278 ಪ್ರಕರಣಗಳು ಮಹಿಳೆಯರ ಮೇಲೆ ನಡೆದಿರುವ ದೌರ್ಜನ್ಯಗಳಾಗಿವೆ. 2016ರಿಂದ ಆರು ವರ್ಷಗಳಲ್ಲಿ ಮಹಿಳಾ ದೌರ್ಜನ್ಯ ಪ್ರಕರಣಗಳು 26.35 ಶೇ. ಏರಿಕೆಯಾಗಿರುವುದು ಸರಕಾರಿ ಅಂಕಿಅಂಶಗಳಿಂದ ಬಹಿರಂಗವಾಗಿದೆ. 2021ರಲ್ಲಿ 176 ಮಹಿಳೆಯರ ಮೇಲೆ ಆ್ಯಸಿಡ್ ದಾಳಿಗಳಾಗಿವೆ. ಮಹಿಳಾ ದೌರ್ಜನ್ಯ ಪ್ರಕರಣಗಳಲ್ಲಿ ಆ್ಯಸಿಡ್ ದಾಳಿಯನ್ನು ಪ್ರತ್ಯೇಕವಾಗಿಟ್ಟು ನಾವು ನೋಡಬೇಕಾಗಿದೆ. ಉಳಿದೆಲ್ಲ ಅಪರಾಧಗಳಿಗೆ ಹೋಲಿಸಿದರೆ ಇದು ಅತ್ಯಂತ ಭಯಾನಕ ಮತ್ತು ವಿಕೃತ ಅಪರಾಧವಾಗಿದೆ. ತಾನು ದ್ವೇಷಿಸುವ ಮಹಿಳೆಯನ್ನು ಜೀವಂತಚ್ಛವವಾಗಿಸುವ ಸ್ಯಾಡಿಸ್ಟ್ ಮನಸ್ಥಿತಿಯನ್ನು ಆರೋಪಿಗಳು ಹೊಂದಿರುತ್ತಾರೆ. ಆಕೆಯನ್ನು ಶಾಶ್ವತವಾಗಿ ಶಿಕ್ಷಿಸುವುದು ಇದರ ಹಿಂದಿರುವ ಉದ್ದೇಶ. ಇಲ್ಲಿ ದಾಳಿ ನಡೆಯುವುದು ಆಕೆಯ ದೇಹದ ಮೇಲಲ್ಲ, ಆಕೆಯ ವ್ಯಕ್ತಿತ್ವದ ಮೇಲೆ.

ಕಳೆದ ವರ್ಷ ದೇಶದಲ್ಲಿ ಮಹಿಳೆಯರ ಮೇಲೆ ನಡೆದ ಆ್ಯಸಿಡ್ ದಾಳಿಗಳ ಪೈಕಿ ಅತ್ಯಂತ ಹೆಚ್ಚಿನ ಘಟನೆಗಳು ಬೆಂಗಳೂರಿನಲ್ಲಿ ನಡೆದಿವೆ ಎನ್ನುವ ಆಘಾತಕಾರಿ ಅಂಶವನ್ನು ರಾಷ್ಟ್ರೀಯ ಅಪರಾಧ ದಾಖಲೆಗಳ ಘಟಕವು ಇತ್ತೀಚೆಗೆ ಹೇಳಿದೆ. 2022ರಲ್ಲಿ ಬೆಂಗಳೂರಿನಲ್ಲಿ ಒಟ್ಟು ಎಂಟು ಮಹಿಳೆಯರು ಆ್ಯಸಿಡ್ ದಾಳಿಗೆ ಒಳಗಾಗಿದ್ದಾರೆ. ದಿಲ್ಲಿ ಮತ್ತು ಅಹಮದಾಬಾದ್ ಎರಡನೇ ಸ್ಥಾನದಲ್ಲಿದೆ. ದಿಲ್ಲಿಯಲ್ಲಿ ಏಳು ಮಹಿಳೆಯರು ಆ್ಯಸಿಡ್ ದಾಳಿಗೊಳಗಾಗಿದ್ದರೆ ಅಹ್ಮದಾಬಾದ್ನಲ್ಲಿ ಐವರು ಮಹಿಳೆಯರು ಈ ದಾಳಿಯ ಸಂತ್ರಸ್ತರಾಗಿದ್ದಾರೆ. ಇದೇ ಸಂದರ್ಭದಲ್ಲಿ ದಿಲ್ಲಿಯಲ್ಲಿ ಆ್ಯಸಿಡ್ ದಾಳಿ ನಡೆಸುವ ಪ್ರಯತ್ನದಲ್ಲಿ ವಿಫಲವಾಗಿರುವ ಏಳು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಹೈದರಾಬಾದ್ ಮತ್ತು ಅಹ್ಮದಾಬಾದ್ನಲ್ಲಿ ಇಂತಹ ತಲಾ ಎರಡು ಪ್ರಕರಣಗಳು ವರದಿಯಾಗಿವೆ. 1982ರಲ್ಲಿ ಮೊತ್ತ ಮೊದಲ ಆ್ಯಸಿಡ್ ದಾಳಿ ಪ್ರಕರಣ ಬೆಳಕಿಗೆ ಬಂತು. ವಿಶೇಷವೆಂದರೆ ಮಹಿಳಾ ದೌರ್ಜನ್ಯಗಳಿಗೆ ಉತ್ತರ ಪ್ರದೇಶ ಕುಖ್ಯಾತವಾಗಿದ್ದರೂ, ಆ್ಯಸಿಡ್ ದಾಳಿಯಂತಹ ಪ್ರಕರಣಗಳಿಗೆ ಬಹುತೇಕ ದಿಲ್ಲಿ, ಬೆಂಗಳೂರು, ಅಹ್ಮದಾಬಾದ್ನಂತಹ ನಗರಗಳೇ ಗುರುತಿಸಲ್ಪಡುತ್ತಿರುವುದು. ಇಂತಹ ದಾಳಿಗಳನ್ನು ನಡೆಸಿದ ಹೆಚ್ಚಿನವರಿಗೆ ಕ್ರಿಮಿನಲ್ ಹಿನ್ನೆಲೆಯೇ ಇದ್ದಿರಲಿಲ್ಲ. ದಾಳಿ ನಡೆಸಿದವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದಾರೆ. ವಿಪರ್ಯಾಸವೆಂದರೆ, ಆ್ಯಸಿಡ್ ದಾಳಿಯ ಭೀಕರತೆಯ ಬಗ್ಗೆ ಅರಿವಿದ್ದೂ ಇದನ್ನು ತಡೆಯುವಲ್ಲಿ ಅಥವಾ ಕಡಿವಾಣ ಹಾಕುವಲ್ಲಿ ಸರಕಾರ ವಿಫಲವಾಗಿರುವುದು. ಆ್ಯಸಿಡ್ ದಾಳಿ ಪ್ರಕರಣಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಬರುತ್ತಿವೆ.2011ರಲ್ಲಿ 83 ದಾಳಿಗಳು ನಡೆದಿದ್ದರೆ, 2021ರಲ್ಲಿ ಇದು 176ಕ್ಕೆ ಏರಿತು.

ಇದೇ ಸಂದರ್ಭದಲ್ಲಿ ದಾಳಿಗೊಳಗಾಗಿರುವವರೆಲ್ಲರೂ ಮಹಿಳೆಯರು. ಈ ದಾಳಿಗಳು ಪುರುಷರ ಮೇಲೆ ಪುರುಷರು ಯಾಕೆ ನಡೆಸುವುದಿಲ್ಲ? ಪುರುಷರು ಕೇವಲ ಮಹಿಳೆಯರ ಮೇಲೆ ಮಾತ್ರ ಆ್ಯಸಿಡನ್ನು ಯಾಕೆ ಬಳಸುತ್ತಾರೆ? ಮುಖ್ಯವಾಗಿ ಪುರುಷ ಹೆಣ್ಣನ್ನು ತನ್ನ ಅಂಕೆಯಲ್ಲಿಟ್ಟುಕೊಳ್ಳಲು ಬಳಸುವ ಕ್ರೌರ್ಯದ ಪರಮಾವಧಿ ಆ್ಯಸಿಡ್ ದಾಳಿಯಾಗಿದೆ. ಪುರುಷ ಪ್ರಧಾನ ಮನಸ್ಥಿತಿ ತೀರಾ ರೋಗಗ್ರಸ್ಥ ಗೊಂಡಾಗ ಈ ದಾಳಿ ನಡೆಯುತ್ತದೆ. ಮುಖ್ಯವಾಗಿ ಮಹಿಳೆಯಿಂದ ಪುರುಷ ತಿರಸ್ಕೃತಗೊಂಡಾಗ ಹತಾಶನಾಗಿ ಇಂತಹ ಕೃತ್ಯಕ್ಕಿಳಿಯುತ್ತಾನೆ. ಇತ್ತೀಚೆಗೆ ಉಡುಪಿಯ ನೇಜಾರಿನಲ್ಲಿ ಇಂತಹದೇ ಮನಸ್ಥಿಯ ವ್ಯಕ್ತಿಯೊಬ್ಬ ಇಡೀ ಕುಟುಂಬವನ್ನೇ ಕೊಂದು ಹಾಕಿದ. ಆ್ಯಸಿಡ್ ದಾಳಿ ನಡೆಸಲು ಮುಂದಾಗುವವನದು ಕೊಲೆಗಡುಕನ ಮನಸ್ಥಿತಿಯೇ ಆಗಿದೆ. ಈ ಸಂದರ್ಭದಲ್ಲಿ ಆತ ಸೇಡು ತೀರಿಸಲು ಮುಂದಾಗುವುದು ಆಕೆಯ ಗುರುತನ್ನೇ ವಿರೂಪಗೊಳಿಸುವ ಮೂಲಕ. ಆ್ಯಸಿಡ್ ದಾಳಿಯ ನೋವು ಕೆಲವೇ ಕ್ಷಣಗಳದ್ದು. ಆದರೆ ಆ ದಾಳಿಯ ಬಳಿಕ ಆಕೆ ತನ್ನ ಮುಖವನ್ನು ಹೊತ್ತು ಬದುಕುವ ನೋವು ಶಾಶ್ವತವಾದುದು. ಅದರಿಂದ ಆಕೆಗೆ ಮುಕ್ತಿಯೇ ಇಲ್ಲ. ಏಕಕಾಲದಲ್ಲಿ ದೈಹಿಕ, ಮಾನಸಿಕ ನೋವುಗಳ ಜೊತೆಗೆ ಉಳಿದ ಬದುಕನ್ನು ಆಕೆ ಕಳೆಯಬೇಕಾಗುತ್ತದೆ. ಆ್ಯಸಿಡ್ ದಾಳಿಯ ಮೂಲಕ ಆತ ಒಂದು ಹೆಣ್ಣನ್ನು ಪರೋಕ್ಷವಾಗಿ ಕೊಂದೇ ಬಿಟ್ಟಿರುತ್ತಾನೆ. ಹೆಣ್ಣಿನ ಪಾಲಿಗೆ ಅದು ಕೊಲೆಗಿಂತಲೂ ಭೀಕರವಾದುದು. ಆದುದರಿಂದ, ಆ್ಯಸಿಡ್ ದಾಳಿ ಮಾಡಿದ ಆರೋಪಿಗೆ ಮರಣ ದಂಡನೆಯೇ ಯೋಗ್ಯ ಶಿಕ್ಷೆಯಾಗಿದೆ.

ದುರದೃಷ್ಟವಶಾತ್ ಆ್ಯಸಿಡ್ ದಾಳಿ ನಡೆಸಿದ ಆರೋಪಿಗಳಿಗೆ ಶಿಕ್ಷೆ ವಿಧಿಸುವಲ್ಲಿ ಭಾರತದಲ್ಲಿ ಇನ್ನೂ ಸ್ಪಷ್ಟವಾದ ಕಠಿಣ ಕಾನೂನೊಂದು ಇಲ್ಲ. 2021ರಲ್ಲಿ 153 ಆರೋಪಿಗಳ ಮೇಲೆ ಚಾರ್ಜ್ಶೀಟ್ ಮಾಡಲಾಗಿದೆಯಾದರೂ, ಇವರಲ್ಲಿ ಶಿಕ್ಷೆಯಾಗಿರುವುದು ಕೇವಲ ಏಳು ಮಂದಿಗೆ ಮಾತ್ರ. ಆದರೆ ಸಂತ್ರಸ್ತೆ ಮಾತ್ರ ಶಾಶ್ವತವಾಗಿ ಶಿಕ್ಷೆಗೊಳಗಾಗುತ್ತಾಳೆ ಮತ್ತು ಆರೋಪಿಯ ಬಿಡುಗಡೆ ಆಕೆಯ ಮೇಲೆ ನಮ್ಮದೇ ಕಾನೂನು ಮಾಡುವ ಇನ್ನೊಂದು ದಾಳಿಯಾಗಿದೆ. ಒಂದು ಕಾಲದಲ್ಲಿ ಬಾಂಗ್ಲಾ ದೇಶ ಆ್ಯಸಿಡ್ ದಾಳಿಗಳಿಗಾಗಿ ಕುಖ್ಯಾತಿಯಾಗಿತ್ತು. ಆದರೆ 2002ರಲ್ಲಿ ಅಲ್ಲಿನ ಸರಕಾರ ಈ ಬಗ್ಗೆ ಬಿಗಿಯಾದ ಕಾನೂನು ಜಾರಿಗೊಳಿಸಿದ ದಿನದಿಂದ ಆ್ಯಸಿಡ್ ದಾಳಿಯಲ್ಲಿ ಭಾರೀ ಇಳಿಕೆ ಕಂಡು ಬಂತು. ಆ್ಯಸಿಡ್ ದಾಳಿಯನ್ನು ತಡೆಯುವುದಕ್ಕೆ ಮೊದಲು ಮಾಡಬೇಕಾಗಿರುವುದು, ಮಾರುಕಟ್ಟೆಯಲ್ಲಿ ಆ್ಯಸಿಡ್ ಆಮದು ಮತ್ತು ಮಾರಾಟದ ಮೇಲೆ ನಿಯಂತ್ರಣ ಹೇರುವುದು. ಇದಾದ ಬಳಿಕ ಆರೋಪಿಗಳ ತುರ್ತು ವಿಚಾರಣೆ ನಡೆಸಿ ಅವರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವುದು. ನಿರ್ಭಯಾ ಪ್ರಕರಣದ ಬಳಿಕ ಕೇಂದ್ರ ಸರಕಾರವು ಭಾರತೀಯ ದಂಡ ಸಂಹಿತೆಗೆ ತಿದ್ದು ಪಡಿ ಮಾಡಿತು. ಆ್ಯಸಿಡ್ ದಾಳಿಯನ್ನು ಪ್ರತ್ಯೇಕ ಅಪರಾಧವೆಂದು ಗುರುತಿಸಿ ಅಪರಾಧಿಗೆ ಕನಿಷ್ಠ 10 ವರ್ಷ ಶಿಕ್ಷೆ ಮತ್ತು ಗರಿಷ್ಠ ಜೀವಾವಧಿ ಶಿಕ್ಷೆಯನ್ನು ವಿಧಿಸಿತು. ಅದೇ ವರ್ಷ ಆ್ಯಸಿಡ್ ಮಾರಾಟದ ಮೇಲೂ ಕೆಲವು ನಿಯಂತ್ರಣಗಳನ್ನು ಹೇರಿತು. ಇಷ್ಟಾದರೂ ಆ್ಯಸಿಡ್ಗಳು ಇನ್ನೂ ದುಷ್ಕರ್ಮಿಗಳ ಕೈ ಸೇರುತ್ತವೆ ಎನ್ನುವುದು ಆತಂಕಕಾರಿಯಾಗಿದೆ. ಚಿನ್ನದ ತಯಾರಿ ಕೆಲಸ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆ್ಯಸಿಡ್ಗಳನ್ನು ಬಳಸಲಾಗುತ್ತದೆ. ಅಲ್ಲಿಂದಲೇ ಅಕ್ರಮವಾಗಿ ಈ ಆ್ಯಸಿಡ್ಗಳನ್ನು ಪಡೆಯಲಾಗುತ್ತದೆ. ಆ್ಯಸಿಡ್ ಎರಚಿದವನಿಗೆ ಮಾತ್ರವಲ್ಲ, ಆತನಿಗೆ ಆ್ಯಸಿಡ್ ಪೂರೈಸಿದಾತನ ಮೇಲೂ ಕ್ರಿಮಿನಲ್ ಕೃತ್ಯಕ್ಕೆ ಸಹಕರಿಸಿದ ಆರೋಪವನ್ನು ಹೊರಿಸಿ ಕಠಿಣ ಶಿಕ್ಷೆ ವಿಧಿಸಿದಾಗ ಇಂತಹ ಅಕ್ರಮ ಆ್ಯಸಿಡ್ ಪೂರೈಕೆಗೆ ತಡೆ ಬೀಳಬಹುದು. ಇದೇ ಸಂದರ್ಭದಲ್ಲಿ ಆ್ಯಸಿಡ್ ದಾಳಿ ಸಂತ್ರಸ್ತೆಗೆ ಸರಕಾರಿ ಉದ್ಯೋಗ ನೀಡುವುದರೊಂದಿಗೆ ಆಕೆಯ ಸಂಪೂರ್ಣ ಹೊಣೆಗಾರಿಕೆಯನ್ನು ಸರಕಾರ ವಹಿಸಬೇಕು. ಯಾಕೆಂದರೆ ಆಕೆಯ ಆ ಸ್ಥಿತಿಗೆ ಸರಕಾರದ ಕಾನೂನು ವ್ಯವಸ್ಥೆಯ ದೌರ್ಬಲ್ಯಗಳೇ ಪರೋಕ್ಷ ಕಾರಣವಾಗಿವೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News