ಸಿದ್ದರಾಮಯ್ಯ- ಶಿವಕುಮಾರ್ ಅವರ ಉತ್ತಮ ಆಡಳಿತ ಬಿಜೆಪಿ ಸಹಿಸುತ್ತಿಲ್ಲ :‌ ಸಚಿವ ಝಮೀರ್ ಅಹ್ಮದ್

Update: 2024-08-09 11:18 GMT

PC : x/@siddaramaiah

ಮೈಸೂರು : ರಾಜ್ಯದಲ್ಲಿ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರಕಾರದ ಉತ್ತಮ ಆಡಳಿತ ನೋಡಿ ಬಿಜೆಪಿ ಸಹಿಸುತ್ತಿಲ್ಲ ಎಂದು ವಸತಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಝಮೀರ್ ಅಹ್ಮದ್ ಖಾನ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸಿದ್ದ ಜನಾಂದೋಲನ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, "ನಮ್ಮ ಸರಕಾರದ ಜನಪರ ತೀರ್ಮಾನ, ಒಳ್ಳೆಯ ಯೋಜನೆ ಅನುಷ್ಠಾನ ನೋಡಿ ಬಿಜೆಪಿ-ಜೆಡಿಎಸ್ ನವರಿಗೆ ಆತಂಕ ಉಂಟಾಗಿದೆ. ಹೀಗಾಗಿ ಸತ್ವ ಇಲ್ಲದ ಮುಡಾ, ವಾಲ್ಮೀಕಿ ನಿಗಮ ವಿಚಾರ ಮುಂದಿಟ್ಟು ಪಾದಯಾತ್ರೆ ನಡೆಸುತ್ತಿದ್ದಾರೆ" ಎಂದು ದೂರಿದರು.

ಬಿಜೆಪಿ ಸರಕಾರದಲ್ಲಿ ಆಗಿರುವಷ್ಟು ಹಗರಣ ಯಾವುದೇ ಸರಕಾರದಲ್ಲಿ ಆಗಿಲ್ಲ. ಕೋವಿಡ್ ಹಗರಣ, ಎಪಿಎಂಸಿ ಹಗರಣ, ಕಿಯೋನಿಕ್ಸ್ ಹಗರಣ, ದೇವರಾಜ ಅರಸು ಟ್ರಕ್ ಟರ್ಮಿನಲ್ ಹಗರಣ ಹೀಗೆ ದೊಡ್ಡ ಪಟ್ಟಿಯೇ ಬೆಳೆಯುತ್ತದೆ. ಇವರು ನೀತಿ ಪಾಠ ಹೇಳಿಕೊಂಡು ತಿರುಗಾಡುತ್ತಿದ್ದಾರೆ ಎಂದು ಕಿಡಿಕಾರಿದರು.

ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದ ನಂತರ ಒಂದೇ ವರ್ಷದಲ್ಲಿ ಐದು ಗ್ಯಾರಂಟಿ ಜಾರಿ ಮಾಡಿದೆ. ಆರನೇ ಗ್ಯಾರಂಟಿ 2.30 ಲಕ್ಷ ಬಡ ಕುಟುಂಬಗಳಿಗೆ ಉಚಿತವಾಗಿ ಮನೆ ಕಟ್ಟಿಕೊಡಲು 8 ಸಾವಿರ ಕೋಟಿ ರೂ. ಭರಿಸಿದೆ. ಸಿದ್ದರಾಮಯ್ಯ ಅವಧಿ ಯಲ್ಲಿ ಮಂಡ್ಯ ಜಿಲ್ಲೆಯಲ್ಲಿ 35, 419 ಮನೆ, ಮೈಸೂರು ಜಿಲ್ಲೆಯಲ್ಲಿ 1 ಲಕ್ಷ ಮನೆ ನೀಡಲಾಗಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ, ಬಿಜೆಪಿ ಅವರು ಮುಖ್ಯಮಂತ್ರಿ ಆಗಿದ್ದಾಗ ಕ್ರಮವಾಗಿ 630, 1800 ಮನೆ ಕೊಟ್ಟಿದ್ದಾರೆ. ಇದು ಬಡವರ ಬಗ್ಗೆ ಇವರ ಕಾಳಜಿ. ಪಾದಯಾತ್ರೆ ಬರುತ್ತಿರುವ ಬಿಜೆಪಿ -ಜೆಡಿಎಸ್ ಮುಖಂಡರನ್ನು ರಾಜ್ಯದ ಅಭಿವೃದ್ಧಿಗೆ ನಿಮ್ಮ ಕೊಡುಗೆ ಏನು ಎಂದು ಜನತೆ ಪ್ರೆಶ್ನೆ ಮಾಡಬೇಕು ಎಂದು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News